ಮಂಜೇಶ್ವರ: ಇಂದು ಯಾರು ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೋ ಅವರು ಇಂದಿನ ರೀಡರ್ ನಾಳೆಯ ಲೀಡರ್ ಎಂಬಂತೆ ಸಾಧಕರಾಗುತ್ತಾರೆ. ಬದುಕಿನ ಗುರಿಯನ್ನು ಮುಟ್ಟುತ್ತಾರೆ. ಪಿ.ಎನ್.ಪಣಿಕ್ಕರ್ ಅಂದು ಓದಿನ ಮಹತ್ವವನ್ನು ಸಾರಿದರು. ಓದುವ ಹವ್ಯಾಸವನ್ನು ಬೆಳೆಸಲು ಪುಸ್ತಕಾಲಯಗಳನ್ನು ಸ್ಥಾಪಿಸಿದರು. ನಮ್ಮ ಕೇರಳ ಸಾಕ್ಷರ ಕೇರಳವಾಗುವಲ್ಲಿ ಅವರ ಕೊಡುಗೆ ಅಪಾರವಾದುದು. ಇಂದಿನ ಡಿಜಿಟಲ್ ಯುಗದಲ್ಲಿ ಕ್ಷಣದಲ್ಲಿ ಮರೆತು ಹೋಗುವ ಮೊಬೈಲ್ ಓದಿಗಿಂತ ಬದುಕಿಗೆ ಬೆಳಕಾಗಬಲ್ಲ ಪುಸ್ತಕಗಳ ಓದಿನತ್ತ ಹೆಚ್ಚು ಗಮನ ಹರಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ ತಿಳಿಸಿದರು.
ಕುಂಜತ್ತೂರು ಜಿ ಎಲ್ ಪಿ ಎಸ್ ಶಾಲೆಯಲ್ಲಿ ನಡೆದ ವಾಚನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಗಡಿನಾಡು ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿ ಜೊತೆ ಕಾರ್ಯದರ್ಶಿ ಸಂಧ್ಯಾ ಗೀತ ಬಾಯಾರು ಪಿ ಎನ್ ಪಣಿಕ್ಕರ್ ಅವರ ಗೌರವಾರ್ಥ ಅವರ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆಯ ಸ್ಮರಣೆಗಾಗಿ ಕೇರಳ ಸರಕಾರವು ಪ್ರತೀ ವರ್ಷ ಜೂನ್ 19 ರಂದು ಎಲ್ಲಾ ಶಾಲಾ ಕಾಲೇಜು ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ವಾಚನ ದಿನವಾಗಿಯೂ ವಾರದ ತನಕ ವಾಚನ ಸಪ್ತಾಹ ಆಚರಿಸುತ್ತಾ ಮಕ್ಕಳಲ್ಲೂ ಸಾರ್ವಜನಿಕರಲ್ಲೂ ಮಹತ್ವವನ್ನು ನೆನಪಿಸಿ ಸಾಹಿತ್ಯ ಲೋಕದೆಡೆಗೆ ಕೊಂಡೊಯ್ಯುವ ಪ್ರಯತ್ನ ಇರುವುದು ಶ್ಲಾಘನೀಯ. ಓದಿ ಮತ್ತು ಬೆಳೆಯಿರಿ ಎಂಬ ಸಂಘಘೋಷವಾಕ್ಯವು ವ್ಯಕ್ತಿಯ ಜೀವನದಲ್ಲಿ ಪುಸ್ತಕಗಳ ಮಹತ್ವವನ್ನು ಸಾರುವ ಪಣಿಕ್ಕರ್ ಅವರು ಹಳ್ಳಿ ಹಳ್ಳಿಗಳಿಗೆ ತೆರಳಿ ಓದಿನ ಮೌಲ್ಯವನ್ನು ಪಸರಿಸಿದ ಅವರು ಸುಮಾರು ಆರು ಸಾವಿರ ಗ್ರಂಥಾಲಯಗಳನ್ನು ಸ್ಥಾಪಿಸಿ ಓದುಗರಿಗಾಗಿ ಪುಸ್ತಕಗಳನ್ನು ಒದಗಿಸುವಲ್ಲಿ ಸಾರ್ಥಕ್ಯ ಪಡೆದಿರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಎಚ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತೀಕ್ ಆಳ್ವ, ಎಸ್. ಮರಿಯ, ಶ್ರೀಜ, ಶೋಭಾ, ಬಸ್ನ, ಸಬೀನಾ, ಇಬ್ರಾಹಿಂ ಸಹಿತ ಹಲವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿಯರಾದ ಸಾಹಿರ ಸ್ವಾಗತಿಸಿ ಸುಚಿತ್ರ ವಂದಿಸಿದರು. ಪೂರ್ಣಿಮ ಜೆ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ವತಿಯಿಂದಶಾಲೆಗೆ ಪುಸ್ತಕ ನೀಡಲಾಯಿತು. ಈ ಸಂದರ್ಭದಲ್ಲಿ ಸಂಧ್ಯಾ ಗೀತ ಬಾಯಾರು ಕನ್ನಡದಲ್ಲಿಯೂ ನಿವೃತ್ತ ಶಿಕ್ಷಕಿ ಶ್ರೀಜಾ ಅವರು ಪುಟಾಣಿಗಳಿಗೆ ಮಲಯಾಳದಲ್ಲಿಯೂ ಕವನದ ಮೂಲಕ ಮನರಂಜಿಸಿದರು.


