ಕುಂಬಳೆ: ಚಿಂತನಶೀಲ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಚಟುವಟಿಕೆಗಳು ಎಂದಿಗೂ ಅಗತ್ಯ. ತಿದ್ದುವ ವ್ಯವಸ್ಥೆಗಳು ಮಾಸಿದಾಗ ಸಹಜವಾದ ರಾಕ್ಷಸೀಯ ಪ್ರವೃತ್ತಿಗಳು ಎದು ನಿಲ್ಲುತ್ತವೆ. ಈ ನಿಟ್ಟಿನಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಪುನರ್ ರೂಪಿಸಲು ರಂಗಭೂಮಿಯೊಂದೇ ಪರಿಹಾರ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ರಂಗಶಂಕರ ಬೆಂಗಳೂರು, ಕಾಸರಗೋಡು ಥಿಯಾಟ್ರಿಕ್ಸ್ ಸೊಸೈಟಿ ಹಾಗೂ ಸವಾಕ್ ಕಾಸರಗೋಡು ಸಹಯೋಗದಲ್ಲಿ ಕಾಸರಗೋಡು ನಗರಸಭಾ ಸಭಾ ಭವನದಲ್ಲಿ ಆಯೋಜಿಸಲಾಗಿರುವ ನಾಲ್ಕು ದಿನಗಳ ಕನ್ನಡ ನಾಟಕೋತ್ಸವದ ಎರಡನೇ ದಿನದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡು ಕನ್ನಡ ರಂಗಭೂಮಿಗೆ ದಶಕಗಳ ಹಿಂದೆ ನೀಡಿದ್ದ ಕೊಡುಗೆಗಳು ಅವಿಸ್ಮರಣೀಯ. ದಿ.ಪ್ರೊ.ವೇಣುಗೋಪಾಲ ಕಾಸರಗೋಡು ಅವರಂತಹ ಸೃಜನಶೀಲರ ಒಡನಾಟ ಅಚ್ಚಳಿಯದ್ದು. ಯುವ ಸಮೂಹವನ್ನು ಮತ್ತೆ ರಂಗಭೂಮಿಗೆ ಕರೆತರಲು ಇಂತಹ ನಾಟಕೋತ್ಸವಗಳು ಪರಿಣಾಮಕಾರಿ ಎಂದವರು ತಿಳಿಸಿದರು.
ಸವಾಕ್ ರಾಜ್ಯ ಖಜಾಂಜಿ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಂಗ ಶಂಕರದ ನಿರ್ದೇಶಕ ಮುದ್ದಣ್ಣ ರಾಟೆಹಳ್ಳಿ, ಹಿರಿಯ ನಟಿ ಜಯಶ್ರೀ ಎಂ.ರಾವ್., ಮಲೆಯಾಳಂ ನಟ ಕೆ.ಎಚ್.ಮೊಹಮ್ಮದ್, ರಂಗ ನಿರ್ದೇಶಕ ಉದಯ ಸಾರಂಗ್, ಪತ್ರಕರ್ತ ಪುರುಷೋತ್ತಮ ಭಟ್.ಕೆ. ಉಪಸ್ಥಿತರಿದ್ದು ಶುಭಹಾರೈಸಿದರು.
ಬಳಿಕ ವಿವೇಕ ಶಾನುಭೋಗ್ ರಚನೆಯ ಬಹುಮುಖಿ ನಾಟಕವನ್ನು ಗಳಿಗೇನಹಳ್ಳಿ ರಂಗಾರಂಭ ತಂಡದವರು ಶ್ರೀನಿವಾಸಮೂರ್ತಿ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ಶನಿವಾರ ಸಂಧ್ಯಾ ಎಸ್.ರಚನೆಯ ನಕ್ಷತ್ರ ಯಾತ್ರಿಕರು ನಾಟಕವನ್ನು ಬೆಂಗಳೂರಿನ ಆಯಾಮ ತಂಡದವರು ಸವಿತ ಭೈರಪ್ಪ ನಿರ್ದೇಶನದಲ್ಲಿ ಪ್ರದರ್ಶಿಸಿದರು. ಇಂದು (ಭಾನುವಾರ) ಕುವೆಂಪು ರಚನೆಯ ಬೆರಳ್ಗೆ ಕೊರಳ್ ನಾಟಕವನ್ನು ನವೀನ್ ಸಾಣೆಹಳ್ಳಿ ನಿರ್ದೇಶನದಲ್ಲಿ ಶೇಷಗಿರಿಯ ಗಜಾನನ ಯುವಕ ಮಂಡಳಿಯವರು ಪ್ರದರ್ಶಿಸುವರು.

.jpg)
.jpg)
