HEALTH TIPS

ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿ ಆಮಿಷ; ಕೇಜ್ರಿವಾಲ್‌ಗೆ ಎಸಿಬಿ ನೋಟಿಸ್

 ನವದೆಹಲಿ: 'ನಮ್ಮ ಅಭ್ಯರ್ಥಿಗಳನ್ನು ಬಿಜೆಪಿಯತ್ತ ಸೆಳೆಯಲು ಆ ಪಕ್ಷದ ಕೆಲವರು ಹಣದ ಆಮಿಷ ಒಡ್ಡಿದ್ದಾರೆ' ಎಂಬ ಆರೋಪದ ಕುರಿತು ಸಾಕ್ಷ್ಯ ಒದಗಿಸುವಂತೆ ಕೋರಿ ದೆಹಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.

ದೆಹಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ಶನಿವಾರ ನಿಗದಿಯಾಗಿದ್ದು, ಅದರ ಮುನ್ನಾದಿನ ನಡೆದಿರುವ ಈ ಬೆಳವಣಿಗೆ ಎಎಪಿ ಮತ್ತು ಬಿಜೆಪಿ ನಡುವಿನ ರಾಜಕೀಯ ತಿಕ್ಕಾಟವನ್ನು ಇನ್ನಷ್ಟು ತೀವ್ರಗೊಳಿಸಿದೆ. 'ಇದು ರಾಜಕೀಯ ಪ್ರೇರಿತ ನಡೆ' ಎಂದು ಎಎಪಿ ಆರೋಪಿಸಿದೆ.


ಕೇಜ್ರಿವಾಲ್‌ ಮಾಡಿರುವ ಆರೋಪವನ್ನು ಎಸಿಬಿಯು ನೋಟಿಸ್‌ನಲ್ಲಿ ಉಲ್ಲೇಖಿಸಿದೆ. ಆರೋಪ ಮಾಡಿ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದು ಹೌದೇ ಎಂಬುದನ್ನು ಖಚಿತಪಡಿಸುವಂತೆ ಮತ್ತು ಹಣದ ಆಮಿಷದ ಬಗ್ಗೆ ವಿವರವಾದ ಮಾಹಿತಿ ಒದಗಿಸುವಂತೆ ಕೇಳಿದೆ.

'ಫೋನ್ ಕರೆಗಳನ್ನು ಸ್ವೀಕರಿಸಿದ ನಿಮ್ಮ ಪಕ್ಷದ 16 ಅಭ್ಯರ್ಥಿಗಳ ಹೆಸರು, ಅವರನ್ನು ಸಂಪರ್ಕಿಸಿದವರ ದೂರವಾಣಿ ಸಂಖ್ಯೆಗಳು ಮತ್ತು ಈ ಆರೋಪಗಳನ್ನು ದೃಢೀಕರಿಸುವ ಇತರ ಪುರಾವೆಗಳನ್ನು ಒದಗಿಸುವಂತೆ ಸೂಚಿಸಿದೆ.

ನಿವಾಸದ ಬಳಿ ಗೊಂದಲ:

ಇದಕ್ಕೂ ಮುನ್ನ ಎಸಿಬಿ ತಂಡವು ಫಿರೋಜ್‌ಶಾ ರಸ್ತೆಯಲ್ಲಿರುವ ಕೇಜ್ರಿವಾಲ್ ಅವರ ನಿವಾಸಕ್ಕೆ ತಲುಪಿದಾಗ ಅಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ಎಸಿಬಿಯು ಬಿಜೆಪಿ ನಾಯಕರ ಸೂಚನೆಯಂತೆ ತನಿಖೆಗೆ ಮುಂದಾಗಿದೆ ಎಂದು ಆರೋಪಿಸಿದ ಎಎಪಿ ಮುಖಂಡರು, ತನಿಖಾ ತಂಡದ ಅಧಿಕಾರಿಗಳು ಕೇಜ್ರಿವಾಲ್‌ ನಿವಾಸ ಪ್ರವೇಶಿಸುವುದನ್ನು ತಡೆದರು. ಈ ವೇಳೆ ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.

'ತನಿಖೆಗೆ ಸಂಬಂಧಿಸಿದ ನೋಟಿಸ್ ಎಸಿಬಿ ಅಧಿಕಾರಿಗಳ ಬಳಿ ಇರಲಿಲ್ಲ. ಸುಮಾರು ಒಂದೂವರೆ ಗಂಟೆಯ ಬಳಿಕವಷ್ಟೇ ಅವರು ನೋಟಿಸ್‌ ಜಾರಿಗೊಳಿಸಿದರು. ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯು ಬಿಜೆಪಿ ಜತೆ ಶಾಮೀಲಾಗಿ ರೂಪಿಸಿರುವ ನಾಟಕ ಇದು' ಎಂದು ಎಎಪಿ ಕಾನೂನು ವಿಭಾಗದ ಮುಖ್ಯಸ್ಥ ಸಂಜೀವ್‌ ನಾಸಿಯಾರ್ ಹೇಳಿದ್ದಾರೆ.

ಲೆಫ್ಟಿನೆಂಟ್‌ ಗವರ್ನರ್ ಆದೇಶ:

'ಬಿಜೆಪಿಯು ಹಣದ ಆಮಿಷವೊಡ್ಡಿರುವುದಾಗಿ ತಪ್ಪು ಮಾಹಿತಿ ಹರಡಿದ ಎಎಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿ ಬಿಜೆಪಿ ದೆಹಲಿ ಘಟಕದ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್‌ ಅವರು ಶುಕ್ರವಾರ ಬೆಳಿಗ್ಗೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರಿಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಸಕ್ಸೇನಾ ಅವರು ಎಸಿಬಿ ತನಿಖೆಗೆ ಆದೇಶಿಸಿದ್ದರು.

'ತಲಾ ₹15 ಕೋಟಿ ಆಮಿಷ'

ಬಿಜೆಪಿಯು ವಿಧಾನಸಭಾ ಚುನಾವಣೆಯ ಮತ ಎಣಿಕೆಗೂ ಮುನ್ನ ಎಎಪಿಯ 16 ಅಭ್ಯರ್ಥಿಗಳಿಗೆ ಹಣದ ಆಮಿಷ ಒಡ್ಡಿ ತನ್ನತ್ತ ಸೆಳೆಯಲು‍ ಪ್ರಯತ್ನಿಸಿದೆ ಎಂದು ಕೇಜ್ರಿವಾಲ್‌ ಅವರು ಗುರುವಾರ ಆರೋಪಿಸಿದ್ದರು. 'ಬಿಜೆಪಿ ಸೇರಿದರೆ ತಲಾ ₹15 ಕೋಟಿ ಹಾಗೂ ಸಚಿವ ಸ್ಥಾನ ನೀಡುವ ಭರವಸೆಯನ್ನೂ ಎಎಪಿ ಅಭ್ಯರ್ಥಿಗಳಿಗೆ ನೀಡಲಾಗಿದೆ' ಎಂದು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದರು. ಕೇಜ್ರಿವಾಲ್‌ ಅವರ ಪರ ನಿಂತಿರುವ ಎಎಪಿ ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್ 'ಅಪರಿಚಿತ ವ್ಯಕ್ತಿಗಳು ನಮ್ಮ 16 ಅಭ್ಯರ್ಥಿಗಳಿಗೆ ಕರೆ ಮಾಡಿ ಆಮಿಷ ಒಡ್ಡಿದ್ದಾರೆ. ಅದರಲ್ಲಿ ಒಂದು ದೂರವಾಣಿ ಸಂಖ್ಯೆಯನ್ನು ನಾವು ಬಹಿರಂಗಪಡಿಸಿದ್ದೇವೆ' ಎಂದಿದ್ದಾರೆ.

'ಮಾಹಿತಿ ಒದಗಿಸಲು ಇ.ಸಿ ನಕಾರ'

ದೆಹಲಿಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಮತಗಟ್ಟೆವಾರು ಮತದಾನದ ಮಾಹಿತಿಯನ್ನು ಹಂಚಿಕೊಳ್ಳಲು ಚುನಾವಣಾ ಆಯೋಗ (ಇ.ಸಿ) ನಿರಾಕರಿಸಿದೆ ಎಂದು ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ. 'ಪ್ರತಿ ಬೂತ್‌ನಲ್ಲಿ ಚಲಾವಣೆಯಾದ ಮತಗಳ ವಿವರಗಳನ್ನು ಒಳಗೊಂಡ 'ಫಾರ್ಮ್‌ 17ಸಿ' ಅಪ್‌ಲೋಡ್‌ ಮಾಡುವಂತೆ ಎಎಪಿ ಮಾಡಿರುವ ಮನವಿಯನ್ನು ಚುನಾವಣಾ ಆಯೋಗ ತಿರಸ್ಕಸಿದೆ. ಆದ್ದರಿಂದ ಮತದಾನಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿರುವ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದೇವೆ' ಎಂದು ಅವರು ಹೇಳಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries