ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದ ಸೆಕ್ಟರ್ 17ರಲ್ಲಿನ ಕೊಳೆಗೇರಿಯೊಂದರಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, 800ಕ್ಕೂ ಅಧಿಕ ಗುಡಿಸಲುಗಳು ಭಸ್ಮವಾಗಿವೆ.
ಮೂರು ಗಂಟೆಗೂ ಹೆಚ್ಚು ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
'ಭಸ್ಮವಾಗಿದ್ದ ಗುಡಿಸಲುಗಳ ಅವಶೇಷಗಳಿಂದ, ಎರಡೂವರೆ ವರ್ಷ ಹಾಗೂ ಮೂರು ವರ್ಷದ ಬಾಲಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ' ಎಂದು ಡಿಸಿಪಿ (ರೋಹಿಣಿ) ಅಮಿತ್ ಗೋಯೆಲ್ ತಿಳಿಸಿದ್ದಾರೆ.
'ಬೆಳಿಗ್ಗೆ 11.55ರ ವೇಳೆಗೆ ಅಗ್ನಿ ಅವಘಡ ಕುರಿತು ಕರೆ ಸ್ವೀಕರಿಸಿದ ಕೂಡಲೇ, ಘಟನಾ ಸ್ಥಳಕ್ಕೆ 17 ಅಗ್ನಿಶಾಮಕ ವಾಹನಗಳನ್ನು ಕಳಿಸಿಕೊಡಲಾಯಿತು. ನಂತರ, ಒಟ್ಟು 26 ವಾಹನಗಳನ್ನು ಅಗ್ನಿ ನಂದಿಸುವ ಕಾರ್ಯಕ್ಕೆ ನಿಯೋಜನೆ ಮಾಡಲಾಯಿತು' ಎಂದು ದೆಹಲಿ ಅಗ್ನಿ ಸೇವೆಗಳ ಅಧಿಕಾರಿ ಹೇಳಿದ್ದಾರೆ.
'ಒಂದು ಗುಡಿಸಲಿನಲ್ಲಿ ಕಾಣಿಸಿಕೊಂಡ ಬೆಂಕಿ, ನಂತರ ಇತರೆಡೆ ವ್ಯಾಪಿಸಿತು. ಇಕ್ಕಟ್ಟಾದ ರಸ್ತೆಗಳ ಕಾರಣ, ಬೆಂಕಿ ನಂದಿಸುವುದು ಸವಾಲಿನದಾಗಿತ್ತು' ಎಂದೂ ಹೇಳಿದ್ದಾರೆ.

