ಕಾಸರಗೋಡು: ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ ಕಾಸರಗೋಡು, ಶ್ರೀ ಮಲ್ಲಿಕಾರ್ಜುನ ದೇವಳ ಕೈಲಾಸ ನಿಲಯ ಬಾರಿಕ್ಕಾಡು, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ, ಉಪಸಂಘ ಚಿತ್ತಾರಿ ಹಾಗೂ ಎ.ಜೆ.ಶೆಟ್ಟಿ ವೈದ್ಯಕೀಯ ಮಹಾವಿದ್ಯಾಲಯ ಕುಂಟಿಕಾನ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರ ಜನ್ಮ ಶತಾಬ್ದಿ ವರ್ಷಾಚರಣೆಯ ಪ್ರಯುಕ್ತ ಫಲಾನುಭವಿಗಳಿಗೆ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವು ಕೈಲಾಸ ನಿಲಯ ಬಾರಿಕ್ಕಾಡು ಚಿತ್ತಾರಿಯಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಸರಗೋಡು ನಗರಸಭೆಯ ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ ಜಗತ್ತನ್ನು ಸುಂದರವಾಗಿ ನೋಡಲು ಕಣ್ಣು ತುಂಬಾನೇ ಮುಖ್ಯ. ಹಾಗೆಯೇ ಅದರ ಆರೈಕೆ ಕೂಡ ಪ್ರಮುಖವಾಗಿರುತ್ತದೆ. ಕಣ್ಣಿನ ಆರೈಕೆಯನ್ನು ಪ್ರತಿಯೊಬ್ಬರು ಮಾಡಬೇಕು. ಸಮಾಜಕ್ಕೆ ಮಾದರಿಯಾಗುವ ಇಂತಹಾ ಶಿಬಿರಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು. ಈ ಸಮಯದಲ್ಲಿ ಸಂಘಟನಾ ಸಂಸ್ಥೆಗಳನ್ನು ಸ್ಮರಿಸಿದರು.
ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ ಕಾಸರಗೋಡು ಇದರ ಕಾರ್ಯದರ್ಶಿ ಲತಾ ಅವರು ಮಾತನಾಡಿ ಚಿತ್ತಾರಿ ಎನ್ನುವ ಊರಿನಲ್ಲಿ ಕಣ್ಣಿನ ಪರೀಕ್ಷಾ ಶಿಬಿರವನ್ನು ಮಾಡಬೇಕೆನ್ನುವ ಹಂಬಲ ಬಹು ದಿನಗಳ ಹಿಂದಿನಿಂದಲೂ ಇತ್ತು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಎಂದರು. ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ ಸಂಸ್ಥೆಯಿಂದ ಇನ್ನು ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುವ ತುಡಿತವನ್ನು ಅವರು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಎ.ಜೆ.ಶೆಟ್ಟಿ ವೈದ್ಯಕೀಯ ಕಣ್ಣಿನ ವಿಭಾಗದ ಮುಖ್ಯಸ್ಥ ಡಾ.ಜಯರಾಮ್ ಶೆಟ್ಟಿ, ಜಿಲ್ಲಾ ರಾಮ ರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಇದರ ಅಧ್ಯಕ್ಷ ಪ್ರದೀಪ್ ಬೇಕಲ್, ಚಿತ್ತಾರಿ ಉಪಸಂಘದ ಗೌರವ ಅಧ್ಯಕ್ಷ ಹರೀಶ್ ಸಿ.ಪಿ, ಮಲ್ಲಿಕಾರ್ಜುನ ದೇವಳದ ಮುಖ್ಯ ಅರ್ಚಕ ಗಣೇಶ ಮಲ್ಲಿಗೆಮಾಡು, ದೇವಳದ ಅಧ್ಯಕ್ಷ ಬಾಲಕೃಷ್ಣ ಮಲ್ಲಿಗೆಮಾಡು ಉಪಸ್ಥಿತರಿದ್ದರು.
ಪವನ್ ಬಿ.ಕೆ ಪ್ರಾರ್ಥನೆ ಸಲ್ಲಿಸಿದರು. ಪ್ರೇಮ್ ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನರೇಶ್ ಮಲ್ಲಿಗೆಮಾಡು ಸ್ವಾಗತಿಸಿ, ಚಿತ್ತಾರಿ ಉಪಸಂಘದ ಅಧ್ಯಕ್ಷ ಗಣೇಶ್ ಬಿ.ಮಲ್ಲಿಗೆಮಾಡು ವಂದಿಸಿದರು. ಗಿರೀಶ್ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು. ಚಿತ್ತಾರಿ ಉಪಸಂಘದ ಸ್ವಯಂ ಸೇವಕರ ಸಹಕಾರದೊಂದಿಗೆ, ದೇವಾಲಯ ಆಡಳಿತ ಮಂಡಳಿಯವರು ನೀಡಿದ ಸ್ಥಳಾವಕಾಶದಿಂದ ಕಾರ್ಯಕ್ರಮ ಯಶಸ್ವಿ ಆಯಿತು. 175 ಕ್ಕೂ ಅಧಿಕ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡರು. ಚಿಕಿತ್ಸ ಶಿಬಿರದ ಕನ್ನಡಕವನ್ನು ಆಗಸ್ಟ್ 10 ರಂದು ಉಚಿತವಾಗಿ ನೀಡಲಾಗುವುದು.

.jpg)
