HEALTH TIPS

ರಾಜ್ಯಸಭೆ: ಸಿಐಎಸ್‌ಎಫ್‌ ನಿಯೋಜಿಸಿಲ್ಲ; ಖರ್ಗೆ ಆರೋಪಕ್ಕೆ ಉಪಸಭಾಪತಿ ಸ್ಪಷ್ಟನೆ

ನವದೆಹಲಿ: ರಾಜ್ಯಸಭೆಯ ಶುಕ್ರವಾರದ ಕಲಾಪದ ವೇಳೆ ವಿರೋಧ ಪಕ್ಷಗಳ ಸದಸ್ಯರು ಸಭಾಪತಿಯ ಪೀಠದ ಮುಂದೆ ಪ್ರತಿಭಟಿಸಲು ಮುಂದಾದಾಗ ತಡೆಯಲು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು (ಸಿಐಎಸ್‌ಎಫ್‌) ನಿಯೋಜಿಸಿದ್ದು ಸರಿಯಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ಮಂಗಳವಾರ ಕಲಾಪದಲ್ಲಿ ಪ್ರಸ್ತಾಪಿಸಿದರು.

ಈ ವಿಷಯ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಈ ಸಂಬಂಧ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರವೇ ಉಪಸಭಾಪತಿ ಹರಿವಂಶ್‌ ಅವರಿಗೆ ಪತ್ರ ಬರೆದು, 'ರಾಜ್ಯಸಭೆಯನ್ನು ಸಿಐಎಸ್‌ಎಫ್‌ ಏನಾದರೂ ವಶಕ್ಕೆ ಪಡೆದಿದೆಯೇ' ಎಂದು ಪ್ರಶ್ನಿಸಿದ್ದರು.

ಮಂಗಳವಾರ ಕಲಾಪದ ಆರಂಭದಲ್ಲಿ ಖರ್ಗೆ ಅವರ ಪತ್ರವನ್ನು ಉಲ್ಲೇಖಿಸಿದ ಉಪ‍ಸಭಾಪತಿ, 'ಸಿಐಎಸ್‌ಎಫ್‌ ಸಿಬ್ಬಂದಿಯನ್ನು ಕೊಠಡಿಯೊಳಗೆ ನಿಯೋಜಿಸಲಾಗಿಲ್ಲ' ಎಂದು ಸ್ಪಷ್ಟಪಡಿಸಿದರು.

'ಕಲಾಪದ ವೇಳೆಯಲ್ಲಿ ನಿರಂತರ ಅಡಚಣೆಗಳು ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಅದು ಸದನದ ಘನತೆಗೆ ತಕ್ಕುದಲ್ಲ. ಸದಸ್ಯರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ವಿರೋಧ ಪಕ್ಷಗಳ ಕೆಲ ಸದಸ್ಯರ ನಡವಳಿಕೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಖರ್ಗೆ ಅವರು, 'ಕಾಂಗ್ರೆಸ್‌ ನಾಯಕರು ಮತ್ತು ವಿರೋಧ ಪಕ್ಷದ ಸದಸ್ಯರು ಸಭಾಪತಿ ಪೀಠದ ಬಳಿ ಪ್ರವೇಶಿಸದಂತೆ ಸಿಐಎಸ್‌ಎಫ್‌ ಸಿಬ್ಬಂದಿ ತಡೆದರು. ಸದನವನ್ನು ನಡೆಸುತ್ತಿರುವುದು ಸಭಾಪತಿಯವರೋ ಅಥವಾ ಸಿಐಎಸ್‌ಎಫ್‌ ವರದಿ ಮಾಡಿಕೊಳ್ಳುವ ಗೃಹ ಸಚಿವ ಅಮಿತ್‌ ಶಾ ಅವರೋ' ಎಂದು ಕೇಳಿದರು.

'ಸಿಐಎಸ್‌ಎಫ್‌ ಅನ್ನು ಸದನದಕ್ಕೆ ಕರೆಸಿದ್ದೇಕೆ. ನಾವೇನು ಭಯೋತ್ಪಾದಕರೇ?' ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಹರಿವಂಶ್‌, 'ಅವರು ಸಿಐಎಸ್‌ಎಫ್‌ ಸಿಬ್ಬಂದಿ ಅಲ್ಲ, ಸಂಸದೀಯ ಭದ್ರತಾ ಸೇವಾ ಸಿಬ್ಬಂದಿ' ಎಂದು ಹೇಳಿದರು.

ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, 'ಪೊಲೀಸರಾಗಲಿ ಅಥವಾ ಸಿಐಎಸ್‌ಎಫ್‌ ಸಿಬ್ಬಂದಿಯಾಗಲಿ ಸದನ ಪ್ರವೇಶಿಸಿಲ್ಲ. ಸದನ ಪ್ರವೇಶಿಸಿದ್ದು ಮಾರ್ಷಲ್‌ಗಳು' ಎಂದು ತಿಳಿಸಿದರು.

ಗದ್ದಲದ ನಡುವೆಯೇ ಮಸೂದೆಗೆ ಅಂಗೀಕಾರ ನವದೆಹಲಿ (ಪಿಟಿಐ): ಚುನಾವಣಾ ಆಯೋಗ ಬಿಹಾರದಲ್ಲಿ ನಡೆಸುತ್ತಿರುವ ಮತದಾರರ ಚೀಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್‌ ಟಿಎಂಸಿ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಮಂಗಳವಾರ ಪೂರ್ತಿ ದಿನ ಪ್ರತಿಭಟನೆ ಮುಂದುವರಿಸಿದರು. ಇದರಿಂದ ಕಲಾಪಕ್ಕೆ ಉಂಟಾದ ಅಡೆತಡೆಗಳ ನಡುವೆಯೇ ಕಸ್ಟಮ್ಸ್‌ ಸುಂಕ ಕಾಯ್ದೆ 1975ಕ್ಕೆ ತಿದ್ದುಪಡಿ ತರುವ ಮಸೂದೆಯ ಮಂಡನೆಗೆ ಉಪಸಭಾಪತಿ ಹರಿವಂಶ್‌ ಅವರು ಅವಕಾಶ ನೀಡಿದರು. ಅದಕ್ಕೆ ಅಂಗೀಕಾರ ದೊರೆಯಿತು. ಅದರ ಬೆನ್ನಲ್ಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಮತ್ತೆ ಆರು ತಿಂಗಳು ವಿಸ್ತರಿಸುವ ನಿರ್ಣಯವನ್ನು ಸರ್ಕಾರ ಮಂಡಿಸಿತು. ಅದಕ್ಕೆ ಧ್ವನಿ ಮತದ ಮೂಲಕ ಅನುಮೋದನೆ ದೊರೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries