ನವದೆಹಲಿ: ದೇಶದಾದ್ಯಂತ ಬಹು ಪಥ ಮುಕ್ತ ಹರಿವು (ಎಂಎಲ್ಎಫ್ಎಫ್) ಟೋಲ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಹೆದ್ದಾರಿ ನಿರ್ವಹಣೆ ವ್ಯವಸ್ಥೆಯು 2026ರ ಅಂತ್ಯದ ಒಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಈ ಯೋಜನೆ ಮತ್ತು ತಂತ್ರಜ್ಞಾನದ ಅನುಷ್ಠಾನದ ನಂತರ ಟೋಲ್ ಪ್ಲಾಜಾಗಳಲ್ಲಿ ಪ್ರಯಾಣಿಕರು ಕಾಯುವುದು ತಪ್ಪಲಿದೆ ಎಂದು ರಾಜ್ಯಸಭೆಯಲ್ಲಿ ಬುಧವಾರ ತಿಳಿಸಿದರು.
ಪ್ರಶ್ನೋತ್ತರ ಅವಧಿ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, 'ನೂತನ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆ ಆಧಾರಿತವಾಗಿರಲಿದೆ. ಇದರಿಂದ ಪ್ರಯಾಣಿಕರ ಸಮಯ ಮತ್ತು ₹1,500 ಕೋಟಿ ಮೌಲ್ಯದ ಇಂಧನವು ಉಳಿತಾಯವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹6,000 ಕೋಟಿ ಹೆಚ್ಚುವರಿ ವರಮಾನ ಬರಲಿದೆ' ಎಂದು ತಿಳಿಸಿದರು.
2026ರ ಅಂತ್ಯದೊಳಗೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ನಿಶ್ಚಿತ. ಆ ಬಳಿಕ ಪ್ರಯಾಣಿಕರು ಟೋಲ್ ಪ್ಲಾಜಾಗಳಲ್ಲಿ ಕಾದು ನಿಲ್ಲಬೇಕಾದ ಅಗತ್ಯವೇ ಇರುವುದಿಲ್ಲ ಎಂದರು.

