ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಚೇರಿಯ ಎದುರು ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳ (ಬಿಎಲ್ಒ) ಅಧಿಕಾರ ರಕ್ಷಾ ಸಮಿತಿ ನಡೆಸುತ್ತಿರುವ ಪ್ರತಿಭಟನೆಯು ಸೋಮವಾರ ತೀವ್ರಗೊಂಡಿದೆ.
ಚುನಾವಣಾ ಅಧಿಕಾರಿಗಳ ಜತೆಗೆ ಪೂರ್ವನಿಯೋಜಿತ ಸಭೆಗಾಗಿ ಬಿಜೆಪಿ ನಾಯಕ ಸುವೇಂಧು ಅಧಿಕಾರಿ ಹಾಗೂ ಇತರೆ ಶಾಸಕರು ಕಚೇರಿ ಬಳಿ ಆಗಮಿಸುತ್ತಿದ್ದಂತೆಯೇ ಬಿಎಲ್ಒ ಸಮಿತಿ ಸದಸ್ಯರು ಪ್ರತಿಭಟನೆ ತೀವ್ರಗೊಳಿಸಿ, ಬ್ಯಾರಿಕೇಡ್ಗಳನ್ನು ದಾಟಲು ಪ್ರಯತ್ನಿಸಿದ್ದಾರೆ.
ಅಧಿಕಾರಿ ಭೇಟಿಯ ಕಾರಣಕ್ಕೆ ಕಚೇರಿ ಪ್ರದೇಶದಲ್ಲಿ ಪೊಲೀಸರು ಪ್ರವೇಶ ನಿರ್ಬಂಧಿಸಿದ್ದರೂ ಸಮಿತಿಯ ಸದಸ್ಯರು ಬ್ಯಾರಿಕೇಡ್ಗಳನ್ನು ಮುರಿದು, ಬಿಜೆಪಿ ನಿಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದು, ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ಕೈಮೀರದಂತೆ ಭದ್ರತಾ ಸಿಬ್ಬಂದಿ ಜಾಗ್ರತೆ ವಹಿಸಿದ್ದಾರೆ.
ತೀವ್ರ ಗದ್ದಲದ ನಡುವೆಯೂ ಅಧಿಕಾರಿ ನೇತೃತ್ವದ ಬಿಜೆಪಿ ನಿಯೋಗವು ಸಿಇಒ ಕಚೇರಿ ಪ್ರವೇಶಿಸಿ, ಯಾವುದೇ ಅಡೆತಡೆ ಇಲ್ಲದೆ ಸಭೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರತಿಭಟನೆಯು ರಾಜಕೀಯ ಪ್ರೇರಿತವಾದುದು. ಸಿಇಒ ಕಚೇರಿಗೆ ಬಿಜೆಪಿ ನಿಯೋಗ ಭೇಟಿ ನೀಡುವುದನ್ನು ತಡೆಯಲೆಂದೇ ಈ ಪ್ರತಿಭಟನೆ ತೀವ್ರಗೊಳಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕೆಲಸಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಮೇಲೆ ಹೆಚ್ಚಿನ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ಬಿಎಲ್ಒ ಸಮಿತಿ ಈ ಪ್ರತಿಭಟನೆ ನಡೆಸುತ್ತಿದೆ.

