ಮಂಜೇಶ್ವರ: ಬೈಕ್ಗೆ ಜೆಸಿಬಿ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಬೈಕ್ ಸವಾರನಾದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ವರ್ಕಾಡಿ ಕೋಳ್ಯೂರು ಇರ್ನಡ್ಕ ಎಂಬಲ್ಲಿನ ರಮೇಶ್ ಹೇರಳ - ಮಲ್ಲಿಕಾ ದಂಪತಿಯ ಏಕ ಪುತ್ರ ಓಂಕಾರ್ ಹೇರಳ (24) ಮೃತಪಟ್ಟ ದುರ್ದೆವಿಯಾಗಿದ್ದಾರೆ. ನಿನ್ನೆ ರಾತ್ರಿ 7.30 ರ ವೇಳೆ ಮೊರತ್ತಣೆಯಲ್ಲಿ ಅಪಘಾತವುಂಟಾಗಿದೆ.
ಓಂಕಾರ್ ಕಡಂಬಾರ್ ಭಾಗದಿಂದ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಜೆಸಿಬಿ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಓಂಕಾರ್ರನ್ನು ಕೂಡಲೇ ಹೊಸಂಗಡಿಯ ಆಸ್ಪತ್ರೆಗೆ ಕೊಂಡೊಯ್ದಿದ್ದು ಅಷ್ಟರೊಳಗೆ ಸಾವು ಸಂಭವಿಸಿದೆ. ಮೃತದೇಹವನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಗೆ ತಲುಪಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಪಘಾತ ಸಂಬಂಧ ಮಂಜೇಶ್ವರ ಪೊಲೀಸರು ಜೆಸಿಬಿ ಚಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ಹೆತ್ತವರ ಸಹಿತ ಅಪಾರ ಬಂಧು - ಮಿತ್ರರನ್ನು ಅಗಲಿದ್ದಾರೆ.

