ಕಾಸರಗೋಡು: ಕಾರ್ಮಿಕರ ಮೂಲಭೂತ ಹಕ್ಕು ನಿರಾಕರಿಸುವ ರೀತಿಯ ಕಾರ್ಮಿಕ ನೀತಿ ಜಾರಿಗೆ ತರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಜಂಟಿ ಮುಷ್ಕರ ಸಮಿತಿ ಕರೆನೀಡಿದ್ದ ಹರತಾಳದಲ್ಲಿ ಕಾಂಗ್ರೆಸ್, ಮುಸ್ಲಿಂ ಲೀಗ್ ನೇತೃತ್ವದ ವಿವಿಧ ಕಾರ್ಮಿಕ ಸಂಘಟನೆಗಳು ಯುಡಿಟಿಎಫ್ ಮೂಲಕ ಕಾಸರಗೊಡಿನಲ್ಲಿ ಪ್ರತ್ಯೇಕವಾಗಿ ಸಮಾರಂಭ ಆಯೋಜಿಸಿತು.
ಎಡರಂಗ ಒಕ್ಕೂಟದ ಜಂಟಿ ಕಾರ್ಮಿಕ ಸಂಘಟನೆಗಳು ನಡೆಸಿದ ಪ್ರತಿಭಟನಾ ಮೆರವಣಿಗೆ, ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಪ್ರತ್ಯೇಕವಾಗಿ ಕಾರ್ಯಕ್ರಮ ಆಯೋಜಿಸಿತ್ತು. ಯುಡಿಟಿಎಫ್ ಸಂಘಟನೆ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡಿನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯನ್ನು ಎಸ್ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮುಹಮ್ಮದ್ಅಶ್ರಫ್ ಉದ್ಘಾಟಿಸಿದರು. ಹಲವರು ಮುಖಂಡರು ಪಾಲ್ಗೊಂಡಿದ್ದರು.
ಕೇರಳಕ್ಕೆ ಸೀಮಿತ:
ಹೆಸರಿಗೆ ರಾಷ್ಟ್ರವ್ಯಾಪಿ ಮುಷ್ಕರವಾಗಿದ್ದರೂ, ಕೇರಳದಲ್ಲಿ ಮಾತ್ರ ಹರತಾಳ ಯಶಸ್ವಿಯಾಗಿದೆ. ಕಾಸರಗೋಡಿನ ಗಡಿ ಪ್ರದೇಶದಲ್ಲಿ ವಾಹನಗಳು ಎಂದಿನಂತೆ ಸಂಚರಿಸಿದ್ದರೆ, ಅಂಗಡಿ ಮುಂಗಟ್ಟುಗಳೂ ತೆರೆದು ಕಾರ್ಯಾಚರಿಸಿತ್ತು. ವಿಟ್ಲದಿಂದ ಪೆರ್ಲ-ಸ್ವರ್ಗ-ಪಾಣಾಜೆ ಹಾದಿಯಾಗಿ ಕೆಲವೊಂದು ಖಾಸಗಿ ಬಸ್ಗಳು ಸಂಚಾರ ನಡೆಸಿತ್ತು.

