ನವದೆಹಲಿ: 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಎಂಬ ಅಧ್ಯಾಯ ಇರುವ ಎಂಟನೇ ತರಗತಿಯ ನಿಷೇಧಿತ ಪಠ್ಯಪುಸ್ತಕದ ಪ್ರತಿಗಳು ಯಾರದ್ದೇ ಬಳಿ ಇದ್ದರೂ ಮಂಡಳಿಗೆ ಮರಳಿಸುವಂತೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಶುಕ್ರವಾರ ಸೂಚನೆ ಹೊರಡಿಸಿದೆ.
ಎಲ್ಲಾ ಸಾಮಾಜಿಕ ಮಾಧ್ಯಮಗಳು ತಮ್ಮ ವೇದಿಕೆಯಲ್ಲಿರುವ ನಿಷೇಧಿತ ಪಠ್ಯದ ಅಂಶಗಳನ್ನು ಕಡ್ಡಾಯವಾಗಿ ಅಳಿಸಿ ಹಾಕುವಂತೆಯೂ ಮಂಡಳಿ ಕಟ್ಟುನಿಟ್ಟಾಗಿ ಹೇಳಿದೆ.
ಸುಪ್ರೀಂ ಕೋರ್ಟ್ ನಿಷೇಧಿಸಿರುವ ಪಠ್ಯವನ್ನು ಡಿಜಿಟಲ್ ವೇದಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸರಣ ಮಾಡದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಗುರುವಾರ ಕೇಂದ್ರ ಶಿಕ್ಷಣ ಇಲಾಖೆ ಪತ್ರ ಬರೆದಿತ್ತು.
ನಿಷೇಧಿತ ಪಠ್ಯಕ್ಕೆ ಸಂಬಂಧಿಸಿದ ಅಂಶಗಳನ್ನು ಸಾಮಾಜಿಕ ಮಾಧ್ಯಮ, ಡಿಜಿಟಲ್ ವೇದಿಕೆಗಳಲ್ಲಿ ಪ್ರಕಟಿಸಿದ್ದರೆ ಈ ಕೂಡಲೇ ಅಳಿಸಿ ಹಾಕುವಂತೆ ಎನ್ಸಿಇಆರ್ಟಿ ನೀಡಿರುವ ಮಾರ್ಗಸೂಚಿಯಲ್ಲಿ ತಿಳಿಸಿದೆ.

