ಕುಂಬಳೆ: ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಗೆಲುವಿಗಾಗಿ ಬೆಂಬಲಿಸಿ ಕೆಲಸ ಮಾಡುವುದಾಗಿ ಕುಂಬಳೆ ಮೂಲದ ಪರಿಸರ ಮತ್ತು ಆರ್ಟಿಐ ಕಾರ್ಯಕರ್ತ ಕೇಶವ ನಾಯಕ್ ಕುಂಬಳೆಯಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ತಾನು ಹೊಸ ಬದಲಾವಣೆಯ ನಿರೀಕ್ಷೆಯೊಂದಿಗೆ ಸುರೇಂದ್ರನ್ ಪರವಾಗಿ ಅದನ್ನು ಹಿಂತೆಗೆದುಕೊಂಡಿರುವುದಾಗಿ ಅವರು ಹೇಳಿದರು.
1994 ರಿಂದ, ಸತತ ಆಯ್ಕೆಯಾಗುವ ರಾಜ್ಯ ಸರ್ಕಾರಗಳು ಮತ್ತು ಜನಪ್ರತಿನಿಧಿಗಳಿಗೆ ವಿವಿಧ ಪರಿಸರ ಸಮಸ್ಯೆಗಳನ್ನು ಎತ್ತುವ ಅರ್ಜಿಗಳು ಮತ್ತು ದೂರುಗಳನ್ನು ಸಲ್ಲಿಸುತ್ತಿದ್ದೇನೆ ಮತ್ತು ಸರ್ಕಾರಗಳು ಅಥವಾ ಜನಪ್ರತಿನಿಧಿಗಳಿಂದ ತನಗೆ ಯಾವುದೇ ಸಹಾನುಭೂತಿಯ ಪರಿಹಾರದ ಉತ್ತರ ಲಭಿಸದ ಕಾರಣ ಪರ್ಯಾಯವಾಗಿ ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು. ಶುಕ್ರವಾರದಿಂದ ಚುನಾವಣಾ ಪ್ರಚಾರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿರುವೆ ಎಂದು ಅವರು ಹೇಳಿದರು.
ಮಂಜೇಶ್ವರ ಹಾಗೂ ಕಾಸರಗೋಡು ಕ್ಷೇತ್ರಗಳು ದಶಕಗಳಿಂದ ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳ ಕೂಪದಲ್ಲಿ ತೊಳಲುತ್ತಿದೆ. ಇಲ್ಲಿಯ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಮಣ್ಣು, ಕಲ್ಲುಗಳ ಅಕ್ರಮ ಮಾರಾಟ ನಡೆಯುತ್ತಿದೆ. ಹೊಸದಾಗಿ ನಿರ್ಮಾಣವಾದ ಮಂಜೇಶ್ವರ ತಾಲೂಕು ಕಚೇರಿ ಹತ್ತು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಉಪ ಸಾರಿಗೆ ಕಚೇರಿ(ಆರ್.ಟಿ.ಒ) ಸಹಿತ ಹಲವು ಮುಖ್ಯ ಕಾರ್ಯಾಲಯಗಳು ಮಂಜೇಶ್ವರಕ್ಕೆ ಇನ್ನೂ ಲಭಿಸಿಲ್ಲ. ಮೂಲ ಸೌಕರ್ಯಗಳಲ್ಲಿ ದಶಕಗಳಷ್ಟು ಹಿನ್ನಡೆ ಕಾಸರಗೋಡು, ಮಂಜೇಶ್ವರ ಕ್ಷೇತ್ರದ ಶಾಪವಾಗಿ ಪರಿಣಮಿಸಿದೆ. ಆರೋಗ್ಯ ವಲಯದ ಚಿಕಿತ್ಸಾಲಯಗಳು ಸಮಸ್ಯೆಗಳ ಆಗರವಾಗಿ ಜನೋಪಯೋಗಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಯುಡಿಎಫ್ ಮತ್ತು ಎಲ್.ಡಿ.ಎಫ್. ಸರ್ಕಾರಗಳು ಪರ್ಯಾಯವಾಗಿ ಆಡಳಿತ ನಡೆಸುವ ರಾಜ್ಯದಲ್ಲಿ ಐದು ದಶಕಗಳಿಂದ ಕಾಸರಗೋಡನ್ನು ಅಧಃಪತನಕ್ಕೆ ತಳ್ಳಿದೆ. ಆಯ್ಕೆಯಾದ ಶಾಸಕರು ಕನಿಷ್ಠ ಏನೇನು ಮಾಡಿದ್ದಾರೆಂಬ ಕಲ್ಪನೆಯೂ ಅವರುಗಳಿಗಿಲ್ಲ. ಈ ನಿಟ್ಟಿನಲ್ಲಿ ಬದಲಾವಣೆ ಅಗತ್ಯ ಎಂದವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.



