ಭುವನೇಶ್ವರ: ಒಡಿಶಾದ ಕಟಕ್ನಲ್ಲಿ ಎಸ್ಸಿಬಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಐಸಿಯುನಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 10 ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಹೇಳಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಮುಖ್ಯಮಂತ್ರಿ ಅಸ್ಪತ್ರೆಗೆ ಧಾವಿಸಿದ್ದಾರೆ.ರೋಗಿಗಳನ್ನು ರಕ್ಷಿಸುವ ವೇಳೆ ಸುಮಾರು 11 ಮಂದಿ ಆಸ್ಪತ್ರೆ ಸಿಬ್ಬಂದಿಗೆ ಗಾಯಗಳಾಗಿವೆ.
ಟ್ರಾಮಾ ಕೇರ್ ಐಸಿಯು ಹಾಗೂ ಪಕ್ಕದಲ್ಲೇ ಇದ್ದ ಐಸಿಯು ಹಾಗೂ ವಾರ್ಡ್ನಲ್ಲಿ 23 ರೋಗಿಗಳಿದ್ದರು. ಮೃತ 10 ಮಂದಿಯ ಪೈಕಿ 7 ಮಂದಿ ಸ್ಥಳದಲ್ಲಿಯೇ ಸುಟ್ಟು ಗಾಯಗಳಿಂದ ಅಥವಾ ಉಸಿರುಕಟ್ಟಿ ಮೃತಪಟ್ಟಿದ್ದಾರೆ. ಮೂವರು ರಕ್ಷಣಾ ಕಾರ್ಯಾಚರಣೆ ವೇಳೆ ಸಾವಿಗೀಡಾಗಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
'ಹತ್ತು ಮಂದಿ ಸಾವಿಗೀಡಾಗಿದ್ದು, ಶಾರ್ಟ್ ಸರ್ಕ್ಯೂಟ್ನಿಂದಾಗಿ ಘಟನೆ ನಡೆದಿರಬಹುದು' ಎಂದು ಮಾಝಿ ಪತ್ರಕರ್ತರೊಂದಿಗೆ ಹೇಳಿದ್ದಾರೆ.
ಟ್ರಾಮಾ ಕೇರ್ ಸೆಂಟರ್ನ ಐಸಿಯುನಲ್ಲಿ ಬೆಂಕಿ ಅನಾಹುತ ಘಟಿಸಿದೆ. ಅಲ್ಲಿ ತೀವ್ರವಾಗಿ ಅನಾರೋಗ್ಯಕ್ಕೀಡಾದ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವುದಾಗಿ ಹೇಳಿದ ಅವರು, ಘಟನೆ ಬಗ್ಗೆ ತಕ್ಷಣ ತನಿಖೆ ನಡೆಸಿ ವರದಿ ಒಪ್ಪಿಸಿ ಎಂದು ಅಗ್ನಿ ಶಾಮಕದ ಡಿ.ಜಿಗೆ ಸೂಚಿಸಿದ್ದಾರೆ.
ನ್ಯಾಯಾಂಗ ತನಿಖೆ ವರದಿ ಬಂದ ಬಳಿಕ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ.
ತಡರಾತ್ರಿ 2.30-3 ಗಂಟೆ ನಡುವೆ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.
'ಗಾಯಗೊಂಡ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಮೃತರ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಲಾಗುವುದು' ಎಂದಿದ್ದಾರೆ.

