ಕೊಚ್ಚಿ: ಕಳೆದ ವರ್ಷ ಉತ್ತರ ಭಾರತದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಹೆಸರುವಾಸಿಯಾಗಿದ್ದ ಯುವತಿ, ತಾನು ಅಪ್ರಾಪ್ತಳಾಗಿದ್ದಾಗ ತನ್ನ ಮೊದಲ ಚಿತ್ರದ ನಿರ್ದೇಶಕರು ಹಲವು ಬಾರಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಕುಟುಂಬದವರಿಗೆ ಹೇಳಿದಾಗ ಅವರು ತನಗೆ ಬೆಂಬಲ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಕಣ್ಣೀರು ಹಾಕಿದ್ದಾರೆ. ನಾನು ಯಾವ ರೀತಿಯ ಕಿರುಕುಳ ಅನುಭವಿಸಿದೆ ಎಂಬುದು ನನಗೇ ಗೊತ್ತು. ನನಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
'ನಿರ್ದೇಶಕರು ನನ್ನನ್ನು ಸ್ಪರ್ಶಿಸಿದ್ದರ ಬಗ್ಗೆ ಕುಟುಂಬಕ್ಕೆ ತಿಳಿಸಿದ್ದೆ. ಆದರೆ, ಅವರು ಇದು ನಿನ್ನ ಮೊದಲ ಚಿತ್ರ ಸುಮ್ಮನಿರು ಎಂದು ಹೇಳಿದರು. ಮೊದಲ ಚಿತ್ರ ಎಂಬ ಕಾರಣಕ್ಕಾಗಿ ಅವರು ನನ್ನ ಮೇಲೆ ಅತ್ಯಾಚಾರ ನಡೆಸಬೇಕೆಂದು ಬಯಸಿದ್ದರೇ? ನಾನು ಬಹಿರಂಗವಾಗಿ ಮಾತನಾಡಿದರೆ ಮಾಧ್ಯಮಗಳು ನನ್ನನ್ನು ದೂಷಿಸುತ್ತವೆ ಎಂದು ನನ್ನ ಕುಟುಂಬದವರು ಹೇಳಿದ್ದರು' ಎಂದು ಇತ್ತೀಚೆಗೆ ಅಂತರ್ಧರ್ಮೀಯ ಯುವಕನನ್ನು ವರಿಸಿದ ಮೊನಾಲಿಸಾ ಹೇಳಿದ್ದಾರೆ.
ಲವ್ ಜಿಹಾದ್ ಎಂಬ ಸುಳ್ಳು ಆರೋಪ
'ನಾವು ಹಿಂದೂ ಸಂಪ್ರದಾಯದಂತೆ ದೇವಾಲಯದಲ್ಲಿ ವಿವಾಹವಾಗಿದ್ದೇವೆ. ಆದರೆ, ನಿರ್ದೇಶಕರು ಇದನ್ನು ಲವ್ ಜಿಹಾದ್ ಎಂದು ಕರೆದಿದ್ಧಾರೆ. ನನ್ನನ್ನು ಸ್ಪರ್ಶಿಸಿದ ಅವರ ತಪ್ಪು ಮುಚ್ಚಿಕೊಳ್ಳಲು ಈ ಆರೋಪ ಮಾಡಿದ್ದಾರೆ. ನಮ್ಮನ್ನು ಬೇರ್ಪಡಿಸಲು ಯಾರಾದರೂ ಪ್ರಯತ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವೆ. ಅವರಿಲ್ಲದೆ ನಾನು ಬದುಕಲಾರೆ' ಎಂದಿದ್ದಾರೆ.
ನನ್ನ ಮದುವೆ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ನಿರ್ದೇಶಕರು ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಿಲ್ಲ ಎಂದಿದ್ದಾರೆ ಎಂಬುದಾಗಿ ಮಹಿಳೆ ಆರೋಪಿಸಿದ್ದಾರೆ.
'ಕೆಟ್ಟ ಮತ್ತು ಅಸಹ್ಯಕರ ವ್ಯಕ್ತಿಯ ಸಿನಿಮಾದಲ್ಲಿ ನಟಿಸಲು ಯಾರು ಇಷ್ಟಪಡುತ್ತಾರೆ. ಸಿನಿಮಾಗಳ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಅವರ ಹೆಸರನ್ನು ಹೇಳಲೂ ನನಗೆ ನಾಚಿಕೆಯಾಗುತ್ತದೆ' ಎಂದು ಅವರು ಆರೋಪಿಸಿದ್ದಾರೆ.
ಆತ್ಮಹತ್ಯೆಗೆ ಮುಂದಾಗಿದ್ದೆ
ಆ ದಿನ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ. ನನ್ನ ಪತಿ ಇಲ್ಲದೇ ಇದ್ದಿದ್ದರೆ ನಾನು ಈಗ ಇಲ್ಲಿ ಇರುತ್ತಿರಲಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.
'ಪತಿ ನನ್ನ ಬೆಂಬಲಕ್ಕೆ ನಿಂತಿದ್ದರು. ಹೋರಾಡುವಂತೆ ನನ್ನನ್ನು ಪ್ರೇರೇಪಿಸಿದರು. ನನಗೆ ಜೀವನ ಕೊಟ್ಟರು' ಎಂದಿದ್ದಾರೆ.
ಅಲ್ಲದೇ, ನಿರ್ದೇಶಕರ ವಿರುದ್ಧ ಸಿನಿಮಾ ಹೆಸರಲ್ಲಿ ಅನುಚಿತ ವರ್ತನೆ ಮತ್ತು ಅಪ್ರಾಪ್ತರ ದುರ್ಬಳಕೆ ಆರೋಪ ಮಾಡಿದ್ದಾರೆ.
ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರದ ನೆರವು ಕೋರಿರುವ ಅವರು, ನಾನು ಮತ್ತು ನನ್ನ ಪತಿಗೆ ಕೊಲೆ ಬೆದರಿಕೆ ಬರುತ್ತಿವೆ ಎಂದು ಆರೋಪಿಸಿದ್ದಾರೆ.

