ಭವಾನಿಪುರ-ಸೊರ್ಭೋಗ/ಹೋಜಾಯ್: ದೇಶದಲ್ಲಿ 2029ರ ಸಾರ್ವತ್ರಿಕ ಚುನಾವಣೆಯಿಂದ ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ 33ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಸ್ಸಾಂನ ಬಾರ್ಪೇಟಾದಲ್ಲಿ ಸೋಮವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಈ ವಿಷಯ ಕುರಿತು ಚರ್ಚಿಸಲು ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ತಿಳಿಸಿದರು.
ಆದರೆ ಕೆಲ ರಾಜಕೀಯ ಪಕ್ಷಗಳು ಮತ್ತು ನಾಯಕರು ಇದರ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹರಡುತ್ತಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು ಅಸ್ಸಾಂನ ಮಹಿಳೆಯರು ಎಲ್ಲ ಪಕ್ಷಗಳನ್ನು ಒತ್ತಾಯಿಸಬೇಕು ಎಂದು ಮೋದಿ ಆಗ್ರಹಿಸಿದರು.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದ ದೇಶದ ನಾಗರಿಕರಿಗೆ ವಿಶೇಷವಾಗಿ ಬಡವರು, ಮಧ್ಯಮ ವರ್ಗ ಮತ್ತು ರೈತರ ಮೇಲಾಗುವ ದುಷ್ಪರಿಣಾಮಗಳನ್ನು ತಗ್ಗಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ವಿರುದ್ಧ ಟೀಕೆ:
'ನಮ್ಮ ಸರ್ಕಾರವು 2025ರಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ 'ಆಪರೇಷನ್ ಸಿಂಧೂರ' ನಡೆಸುತ್ತಿದ್ದರೆ, ಕಾಂಗ್ರೆಸ್ನವರು ಪಕ್ಕದ ದೇಶದ ರಾಗಕ್ಕೆ ತಕ್ಕಂತೆ ಹಾಡುತ್ತಿದ್ದರು. 2016ರ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗಲೂ ಕಾಂಗ್ರೆಸ್ ಹಾಗೆಯೇ ವರ್ತಿಸಿತ್ತು' ಎಂದು ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ಕಟುವಾಗಿ ಟೀಕಿಸಿದರು.
'ಕಾಂಗ್ರೆಸ್ಗೆ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಇಲ್ಲ' ಎಂದು ಆರೋಪಿಸಿದ ಅವರು, ಬಿಜೆಪಿಯು ದೀರ್ಘಾವಧಿ ಬೆಳವಣಿಗೆ ಮತ್ತು ಸರ್ವತೋಮುಖ ಅಭಿವೃದ್ದಿಯನ್ನು ಕೇಂದ್ರೀಕರಿಸಿದೆ ಎಂದರು.
'ದಶಕಗಳಿಂದ ಮಾಜಿ ಸೈನಿಕರ ಬೇಡಿಕೆಯಾದ 'ಒಂದು ಶ್ರೇಣಿ, ಒಂದು ಪಿಂಚಣಿ' ಯೋಜನೆಯ ಜಾರಿಯನ್ನು ಕಾಂಗ್ರೆಸ್ ನಿರ್ಲಕ್ಷಿಸಿತ್ತು. ಆದರೆ ನಾವು ಅವರ ಬೇಡಿಕೆಗೆ ನ್ಯಾಯ ಒದಗಿಸಿದ್ದೇವೆ. ಇಲ್ಲಿಯವರೆಗೆ ಸೇನಾ ಸಿಬ್ಬಂದಿಯ ಬ್ಯಾಂಕ್ ಖಾತೆಗಳಿಗೆ ₹1.24 ಲಕ್ಷ ಕೋಟಿ ವಿತರಿಸಿದ್ದೇವೆ' ಎಂದು ಪ್ರಧಾನಿ ಮೋದಿ ವಿವರಿಸಿದರು
ಗಾಂಧಿ ಕುಟುಂಬವು ವಂಶಪಾರಂಪರ್ಯ ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಅವರು ದೂರಿದರು.
ಕಾಂಗ್ರೆಸ್ನದ್ದು 'ಸುಳ್ಳಿನ ಅಂಗಡಿ':
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಮೊಹಬ್ಬತ್ ಕಿ ದುಕಾನ್' ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ಕಾಂಗ್ರೆಸ್ನದ್ದು 'ಮಿಥ್ಯಾ ಕಿ ದುಕಾನ್' (ಸುಳ್ಳಿನ ಅಂಗಡಿ) ಆಗಿದೆ ಎಂದು ಜರೆದರು.
ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಲ್ಲಿ ಅವರು ಚುನಾವಣೆಗೂ ಮುನ್ನ ದೊಡ್ಡ ಭರವಸೆಗಳನ್ನು ನೀಡಿದ್ದರು. ಆದರೆ ಅವುಗಳನ್ನು ಇಲ್ಲಿಯವರೆಗೂ ಈಡೇರಿಸಿಲ್ಲ. ಹೀಗಾಗಿ ಕಾಂಗ್ರೆಸ್ನ ಸುಳ್ಳು ಭರವಸೆಗಳಿಗೆ ಬಲಿಯಾಗಬೇಡಿ ಎಂದು ಪ್ರಧಾನಿ ಹೇಳಿದರು.
ಜೆ.ಪಿ.ನಡ್ಡಾ ಕೇಂದ್ರ ಸಚಿವಅಸ್ಸಾಂನ ಚಹಾ ಬುಡಕಟ್ಟು ಜನಾಂಗದವರನ್ನು ಕಾಂಗ್ರೆಸ್ ಪಕ್ಷವು ಪ್ರತಿ ಐದು ವರ್ಷಗಳಿಗೊಮ್ಮೆ ಕೊಯ್ಲು ಮಾಡುವ ಮತಬ್ಯಾಂಕ್ ಆಗಿ ಪರಿಗಣಿಸಿದೆ ಆದರೆ ಅವರ ಏಳಿಗೆಗೆ ಏನನ್ನೂ ಮಾಡಿಲ್ಲ
ಯುಸಿಸಿ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ-ಮೋದಿ
ನವದೆಹಲಿ: ಬಿಜೆಪಿಯ ಕಾರ್ಯಸೂಚಿಗಳ ಪೈಕಿ ಅಪೂರ್ಣವಾಗಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು 'ಒಂದು ರಾಷ್ಟ್ರ ಒಂದು ಚುನಾವಣೆ' ಬಗ್ಗೆ ಗಂಭೀರ ಮತ್ತು ಸಕಾರಾತ್ಮಕ ಚರ್ಚೆಗಳು ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಬಿಜೆಪಿ ಸಂಸ್ಥಾಪನಾ ದಿನದಂದು ವರ್ಚುವಲ್ ಆಗಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು 'ಬಿಜೆಪಿಯು ಪ್ರತಿ ಸವಾಲನ್ನೂ ಎದುರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ. ಅಲ್ಲದೆ ಸತತ ಪ್ರಯತ್ನದ ಮೂಲಕ ಅವುಗಳನ್ನು ಸಾಧಿಸುತ್ತದೆ ಎಂಬುದು ದೇಶದ ಜನರಿಗೆ ತಿಳಿದಿದೆ' ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ಬಿಜೆಪಿ ಕಾರ್ಯಕರ್ತರು ತುರ್ತು ಪರಿಸ್ಥಿತಿ ಮತ್ತು ಇತರ ಸಂದರ್ಭಗಳಲ್ಲಿ ಕಾಂಗ್ರೆಸ್ನಿಂದ ದಬ್ಬಾಳಿಗಳನ್ನು ಎದುರಿಸಿ ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ ಎಂದು ಅವರು ಸ್ಮರಿಸಿದರು. ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಹಿಂಸೆಯು ರಾಜಕೀಯ ಸಂಸ್ಕೃತಿಯಾಗಿ ಪರಿವರ್ತನೆ ಆಗಿಬಿಟ್ಟಿದೆ. ಅಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಪ್ರಾಣತ್ಯಾಗ ಮಾಡಿದ್ದಾರೆ ಎಂದು ಮೋದಿ ತಿಳಿಸಿದರು. 'ನಮ್ಮ ಸರ್ಕಾರವು ಬ್ರಿಟಿಷ್ ಯುಗದ ನೂರಾರು ಕರಾಳ ಕಾನೂನುಗಳನ್ನು ಅಂತ್ಯಗೊಳಿಸಿದೆ.
ಪ್ರಜಾಪ್ರಭುತ್ವಕ್ಕಾಗಿ ಹೊಸ ಸಂಸತ್ತಿನ ಕಟ್ಟಡ ನಿರ್ಮಿಸಿದೆ ಸಾಮಾನ್ಯ ವರ್ಗದ ಬಡವರಿಗೆ ಶೇ 10ರಷ್ಟು ಮೀಸಲಾತಿ ಒದಗಿಸಿದೆ ತ್ರಿವಳಿ ತಲಾಖ್ ನಿಷೇಧ ಕಾನೂನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ಹಲವು ಮಹತ್ವದ ಕಾರ್ಯಗಳನ್ನು ಮಾಡಲಾಗಿದೆ ಎಂದು ಹೇಳಿದರು.

