ಹೈದರಾಬಾದ್: ನಿಷೇಧಿತ ಸಿಪಿಐ ಮಾವೋವಾದಿ ಸಂಘಟನೆಯ ಹಿರಿಯ ಕಮಾಂಡರ್ ಸೇರಿದಂತೆ 42 ನಕ್ಸಲರು ಶುಕ್ರವಾರ ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ತೆಲಂಗಾಣ ಡಿಜಿಪಿ ಬಿ. ಶಿವಧಾರ್ ರೆಡ್ಡಿ ತಿಳಿಸಿದ್ದಾರೆ.
ಶರಣಾದವರ ಪೈಕಿ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ (ಪಿಎಲ್ಜಿಎ) ಕಮಾಂಡರ್ ಆಗಿದ್ದ ಸೋದಿ ಮಲ್ಲಾ ಅಲಿಯಾಸ್ ಕೇಶಾಲ್ ಕೂಡ ಸೇರಿದ್ದಾರೆ.
ಅವರೊಂದಿಗೆ ಇತರೆ ಸದಸ್ಯರು ಕೂಡ ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಕಾಲಿಟ್ಟಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಶರಣಾಗತರು ಐದು ಎಕೆ-47 ರೈಫಲ್ಗಳು, ನಾಲ್ಕು ಎಸ್ಎಲ್ಆರ್ ರೈಫಲ್ಗಳು ಮತ್ತು 800 ಗ್ರಾಂ ಚಿನ್ನವನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬೆಳವಣಿಗೆಯೊಂದಿಗೆ ತೆಲಂಗಾಣವು ಸಂಪೂರ್ಣವಾಗಿ ಸಿಪಿಐ ಮಾವೋವಾದಿ ಸಶಸ್ತ್ರ ಸಂಘಟನೆಗಳಿಂದ ಮುಕ್ತವಾದಂತಾಗಿದೆ ಎಂದೂ ರೆಡ್ಡಿ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಸಿಪಿಐನ (ಮಾವೋವಾದಿ) ತೆಲಂಗಾಣ ರಾಜ್ಯ ಸಮಿತಿಯ (ಟಿಸಿಎಸ್) ಎಲ್ಲಾ ನಾಯಕರೂ ಇದೀಗ ಶರಣಾದಂತಾಗಿದ್ದು, ಟಿಸಿಎಸ್ ಇನ್ನು ಅಸ್ತಿತ್ವದಲ್ಲಿರುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

