ಬದಿಯಡ್ಕ: ಜೀವನಮೌಲ್ಯಗಳನ್ನು ರೂಪಿಸಿಕೊಳ್ಳುವಲ್ಲಿ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿದೆ. ಮಕ್ಕಳಲ್ಲಿ ಧಾರ್ಮಿಕ ಚಿಂತನೆಗಳು ಮೂಡಿಬಂದು ಅನಾದಿ ಕಾಲದಿಂದ ನಡೆದುಬಂದ ಸಂಪ್ರದಾಯಗಳು ಮುಂದುವರಿಯಬೇಕಾಗಿದೆ. ವೇದ ಮಂತ್ರಗಳ ಪಠಣದಿಂದ ಪರಿಸರವು ಪರಿಶುದ್ಧವಾಗುತ್ತದೆ ಎಂದು ಹಿರಿಯರಾದ ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ ಹೇಳಿದರು.
ಕಾಸರಗೋಡು ಹೊಸದುರ್ಗ ಹೈವಬ್ರಾಹ್ಮಣ ಸಭಾದ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ಏಪ್ರಿಲ್ ಮೇ ತಿಂಗಳುಗಳಲ್ಲಿ ನಡೆದುಬರುತ್ತಿರುವ ವಸಂತ ವೇದ ಶಿಬಿರದ ಹಾಲಿ ವರ್ಷದ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಪ್ರಾಸಾವಿಕವಾಗಿ ಮಾತನಾಡಿ, ಹಿರಿಯರ ಕಾಲದಿಂದಲೇ ನಡೆದುಕೊಂಡು ಬಂದ ವೇದಪಾಠ ತರಗತಿಗಳು ಪೋಷಕರು ಹಾಗೂ ದಾನಿಗಳ ನೆರವಿನಿಂದ ಮುಂದುವರಿಯುತ್ತಿದೆ. ವೇದಾಧ್ಯಯನ ಸುಸೂತ್ರವಾಗಿ ಮುಂದುವರಿಸುವ ನಿಟ್ಟಿನಲ್ಲಿ ವೇದವಿದ್ಯಾ ಸರಸ್ವತಿ ಸೇವೆ, ವಟು ಸಮಾರಾಧನೆ ಮಾಡಿಸಿಕೊಂಡಾಗ ಪುಣ್ಯ ಲಭಿಸುತ್ತದೆ ಎಂದರು.
ದೇವಾಲಯದ ಆಡಳಿತ ಮಂಡಳಿಯ ಪೂರ್ಣ ಸಹಕಾರದೊಂದಿಗೆ ಅನೇಕ ವರ್ಷಗಳಿಂದ ವಸಂತವೇದ ಶಿಬಿರವು ನಡೆದುಬರುತ್ತಿದೆ. ವೇದ ಗುರುಗಳಾದ ಮಹಾಗಣಪತಿ ಅಳಕ್ಕೆ, ಮುರಳೀಧರ ಶರ್ಮ ಅಳಕ್ಕೆ, ಉಪಸ್ಥಿತರಿದ್ದರು. ಕಾಸರಗೋಡು ಮತ್ತು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಕೋಶಾಧಿಕಾರಿ ವೈ.ಕೆ.ಗೋವಿಂದ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು, ಪದಾಧಿಕಾರಿಗಳಾದ ಉದಯಶಂಕರ ಭಟ್ ಪಟ್ಟಾಜೆ, ಕೃಷ್ಣ ಕುಮಾರ ಸಿದ್ದನಕರೆ ಉಪಸ್ಥಿತರಿದ್ದರು.

.jpg)
.jpg)
