ನವದೆಹಲಿ: 2015ರಲ್ಲಿ ನಡೆದ 'ರೈಲ್ ನೀರ್' ಹಗರಣ ಕುರಿತು ಸಿಬಿಐ ಮತ್ತು ಇ.ಡಿ ನಡೆಸಿರುವ ತನಿಖೆಯ ವಿವರವನ್ನು ಆರ್ಟಿಐ ಅರ್ಜಿದಾರರಿಗೆ ನೀಡಲು ನಿರಾಕರಿಸಿದಕ್ಕಾಗಿ ಕೇಂದ್ರ ಮಾಹಿತಿ ಆಯೋಗ, ಭಾರತೀಯ ರೈಲ್ವೆ ಆಹಾರ ಸರಬರಾಜು ಮತ್ತು ಪ್ರವಾಸೋದ್ಯಮವನ್ನು (ಐಆರ್ಸಿಟಿಸಿ) ತರಾಟೆಗೆ ತೆಗೆದುಕೊಂಡಿದೆ.
'ರೈಲ್ ನೀರ್' ಹಗರಣದಲ್ಲಿ ತಾವು ಶಾಮೀಲಾಗಿರುವುದು ಸತ್ಯವೋ ಅಲ್ಲವೋ ಎಂದು ಸಿಬಿಐ ಮತ್ತು ಇ.ಡಿ. ಎದುರು ಬಿಡ್ಡರ್ಗಳು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆಯೇ?' ಎಂದು ಕೋರಿ ಆರ್ಟಿಐ ಅರ್ಜಿದಾರರು ಐಆರ್ಸಿಟಿಸಿಯಿಂದ ಮಾಹಿತಿ ಕೇಳಿದ್ದರು.
ಐಆರ್ಸಿಟಿಸಿಯು ಈ ದತ್ತಾಂಶಗಳನ್ನು ನೀಡಲುನಿರಾಕರಿಸಿದ್ದಲ್ಲದೇ, 'ಆರ್ಟಿಐ , 2005ರ ಸೆಕ್ಷನ್ 8 (ಡಿ) ಪ್ರಕಾರ, ಅರ್ಜಿದಾರರು ಕೋರಿದ ಮಾಹಿತಿಯನ್ನು ಬಹಿರಂಗಪಡಿಸಲಾಗದು' ಎಂದಿದೆ.
2025ರ ಆರ್ಟಿಐ ಕಾಯ್ದೆಯ ಸೆಕ್ಷನ್ 8(1)(ಡಿ) ಪ್ರಕಾರ, ವಾಣಿಜ್ಯ ವಹಿವಾಟಿನ ಗೋಪ್ಯತೆ, ವ್ಯಾಪಾರ ರಹಸ್ಯಗಳು ಅಥವಾ ಬೌದ್ಧಿಕ ಆಸ್ತಿಯನ್ನು ಒಳಗೊಂಡಿರುವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡುತ್ತದೆ. ಇದನ್ನು ಬಹಿರಂಗಪಡಿಸು ವುದರಿಂದ ಥರ್ಡ್ ಪಾರ್ಟಿಯ ಸ್ಪರ್ಧಾತ್ಮಕ ಸ್ಥಾನಕ್ಕೆ ಹಾನಿಯಾಗುತ್ತದೆ' ಎಂದು ಐಆರ್ಸಿಟಿಸಿ ಹೇಳಿದೆ.
ಐಆರ್ಸಿಟಿಸಿ ನೀಡಿರುವ ಉತ್ತರವನ್ನು ದೋಷಪೂರಿತಎಂದು ಪರಿಗಣಿಸಿದ ಸಿಐಸಿ, 'ಈ ಉತ್ತರಗಳು ಆರ್ಟಿಐ ಕಾಯ್ದೆಯ ನಿಬಂಧನೆಗಳಿಗೆ ಹೊಂದಿಕೆ ಆಗುವುದಿಲ್ಲ' ಎಂದು ಹೇಳಿದೆ. ಆರ್ಟಿಐ ಅರ್ಜಿಯನ್ನು ಮರುಪರಿಶೀಲಿಸಲು ಮತ್ತು 'ಹೊಸ, ತಾರ್ಕಿಕ ಉತ್ತರ' ವನ್ನು ನೀಡಲು ಐಆರ್ಸಿಟಿಸಿಗೆ ನಿರ್ದೇಶನ ನೀಡಿದೆ.

