ವಿಶಾಖಪಟ್ಟಣ: ಕ್ರಿಕೆಟ್ ಪಂದ್ಯವೊಂದರ ವೇಳೆ ರನೌಟ್ ತೀರ್ಪಿಗೆ ಸಂಬಂಧಿಸಿದಂತೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, 21 ವರ್ಷದ ಅಂಪೈರ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಈ ಘಟನೆಯು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.
ಭಾನುವಾರ ಸಂಜೆ ಇಲ್ಲಿನ ಸ್ಥಳೀಯ ಮೈದಾನದಲ್ಲಿ ಪಂದ್ಯ ನಡೆಯುತ್ತಿತ್ತು.
ಈ ವೇಳೆ ಡೋಲಾ ಅಜಿತ್ ಬಾಬು ಮತ್ತು ಬುಡುಮುರಿ ಚಿರಂಜೀವಿ ಅಂಪೈರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಪಂದ್ಯದ ಮಧ್ಯೆ ರನೌಟ್ ತೀರ್ಪಿನ ವಿಚಾರವಾಗಿ ಆಟಗಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಕಿಶೋರ್ ಎಂಬಾತ ಅಂಪೈರ್ಗಳು ಮತ್ತು ಆಟಗಾರ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದ.
ಈ ವೇಳೆ ಅಜಿತ್ ಬಾಬು ಮತ್ತು ಚಿರಂಜೀವಿ ಮಧ್ಯಪ್ರವೇಶಿಸಿ ಮೈದಾನದಲ್ಲೇ ವಿವಾದವನ್ನು ಬಗೆಹರಿಸಿದ್ದರು. ಆರೋಪಿ ಕಿಶೋರ್ ಅಂಪೈರ್ಗಳಿಗೆ ಕರೆ ಮಾಡಿ ವಿಷಯ ಬಗೆಹರಿಸಿಕೊಳ್ಳೋಣ ಎಂದು ಹತ್ತಿರದ ಸ್ಥಳವೊಂದಕ್ಕೆ ಬರುವಂತೆ ಹೇಳಿದ್ದನು. ಅಜಿತ್ ಬಾಬು ಮತ್ತು ಚಿರಂಜೀವಿ ಅಲ್ಲಿಗೆ ತಲುಪುತ್ತಿದ್ದಂತೆಯೇ ಮತ್ತೆ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಕಿಶೋರ್, ಹಠಾತ್ತನೆ ಚಾಕು ತೆಗೆದು ಇಬ್ಬರು ಅಂಪೈರ್ಗಳ ಮೇಲೆ ದಾಳಿ ಮಾಡಿದ್ದಾನೆ. ದಾಳಿಯಲ್ಲಿ ಅಜಿತ್ ಬಾಬು ಎದೆಗೆ ತೀವ್ರವಾಗಿ ಗಾಯವಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

