ನವದೆಹಲಿ: ಇ-ಕಾಮರ್ಸ್ ರಫ್ತು ಮತ್ತು ಕೊರಿಯರ್ ಮೂಲಕ ನಡೆಯುವ ಆಮದು-ರಫ್ತು ಪ್ರಕ್ರಿಯೆಗಳನ್ನು ಬಲಪಡಿಸಲು ಹಾಗೂ ಸರಳಗೊಳಿಸಲು ಪರೋಕ್ಷ ತೆರಿಗೆಗಳು ಮತ್ತು ಸುಂಕಗಳ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಸಮಗ್ರ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದೆ.
ರಫ್ತು ಮಾಡುವ ಪ್ರತಿ ರವಾನೆಯ ಮೇಲೆ ಇದ್ದ ₹10 ಲಕ್ಷದ ಗರಿಷ್ಠ ಮೌಲ್ಯದ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು, ವಿದೇಶಕ್ಕೆ ಕಳುಹಿಸಿದ ನಂತರ ವಾಪಸ್ ಬರುವ ಅಥವಾ ತಿರಸ್ಕರಿಸಲ್ಪಟ್ಟ ಪಾರ್ಸೆಲ್ಗಳನ್ನು ನಿರ್ವಹಿಸಲು ಸರಳವಾದ ಹೊಸ ಚೌಕಟ್ಟು ರೂಪಿಸುವುದು, ಕ್ಲಿಯರ್ ಆಗದ ಪಾರ್ಸೆಲ್ಗಳನ್ನು ಮರಳಿ ಮೂಲ ಸ್ಥಾನಕ್ಕೆ ಕಳುಹಿಸಲು ಕಾನೂನುಬದ್ಧ ಬೆಂಬಲವಿರುವ ವ್ಯವಸ್ಥೆಯನ್ನು ಜಾರಿಗೊಳಿಸುವ ಗುರಿ ಹೊಂದಲಾಗಿದೆ ಎಂದು ಹಣಕಾಸು ಸಚಿವಾಲಯ ಮಂಗಳವಾರ ತಿಳಿಸಿದೆ.
ಇದು ಸರಕು ಸಾಗಣೆಯ ಅಡಚಣೆಗಳನ್ನು ಕಡಿಮೆ ಮಾಡುತ್ತದೆ. ಭಾರತದ ರಫ್ತು ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಬಲಪಡಿಸುತ್ತದೆ. ವಿಶೇಷವಾಗಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು, ಕುಶಲಕರ್ಮಿಗಳು ಮತ್ತು ನವೋದ್ಯಮಗಳಿಗೆ ಇದು ಸಹಕಾರಿಯಾಗಲಿದೆ. ಈ ಸುಧಾರಣೆಗಳ ಭಾಗವಾಗಿ, ಕೊರಿಯರ್ ಮೂಲಕ ಕಳುಹಿಸುವ ರಫ್ತು ಸರಕುಗಳ ಮೇಲಿದ್ದ ₹10 ಲಕ್ಷದ ಮಿತಿಯನ್ನು ಈಗ ತೆಗೆದುಹಾಕಲಾಗಿದೆ ಎಂದು ಹೇಳಿದೆ.
ಈ ಕ್ರಮವು ರಫ್ತು ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ವಿಶೇಷವಾಗಿ ಇ-ಕಾಮರ್ಸ್ ರಫ್ತುದಾರರಿಗೆ ಇದು ಹೆಚ್ಚು ಸಹಕಾರಿಯಾಗಲಿದೆ. ಸರಕುಗಳ ಸಾಗಣೆಯ ಮೌಲ್ಯದ ವಿಚಾರದಲ್ಲಿ ಹೆಚ್ಚಿನ ಹೊಂದಾಣಿಕೆಗೆ ಅವಕಾಶ ನೀಡುತ್ತದೆ. ಕೊರಿಯರ್ ಮೂಲಕವೇ ಸುಲಭವಾಗಿ ರಫ್ತು ಮಾಡಲು ಅನುವು ಮಾಡಿಕೊಡುತ್ತದೆ. ಇದರಿಂದ, ಮೌಲ್ಯದ ಮಿತಿಗಳ ಕಾರಣಕ್ಕಾಗಿ ಇಂತಹ ಸಾಗಣೆಗಳನ್ನು ಸಾಂಪ್ರದಾಯಿಕ ವಿಮಾನ ಅಥವಾ ಸಮುದ್ರದ ಮೂಲಕ ಸರಕು ಸಾಗಣೆಗೆ ಬದಲಾಯಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದೆ.
ಕಳೆದ ತಿಂಗಳು ಮಂಡಿಸಿದ್ದ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಈ ಸುಧಾರಣಾ ಕ್ರಮಗಳನ್ನು ಘೋಷಿಸಲಾಗಿತ್ತು.

