ತಿರುವನಂತಪುರ: ಇತ್ತೀಚೆಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯ ಮತದಾನದ ಸಮಗ್ರ ಅಂಕಿಅಂಶ ಬಿಡುಗಡೆ ಮಾಡಲು ಚುನಾವಣಾ ಆಯೋಗವು ವಿಳಂಬ ಮಾಡುತ್ತಿರುವುದನ್ನು ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರಶ್ನಿಸಿವೆ.
ಏಪ್ರಿಲ್ 9ರಂದು 140 ಸದಸ್ಯ ಬಲದ ಕೇರಳದ ವಿಧಾನಸಭೆಗೆ ನಡೆದ ಚುನಾವಣೆಯ ದತ್ತಾಂಶವನ್ನು ತಕ್ಷಣ ಸಾರ್ವಜನಿಕಗೊಳಿಸುವಂತೆ ಕಾಂಗ್ರೆಸ್ನ ಹಿರಿಯ ನಾಯಕ ವಿ.ಡಿ. ಸತೀಶನ್ ಒತ್ತಾಯಿಸಿದ್ದಾರೆ.ಈ ಕುರಿತು ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಮತದಾನ ಮುಗಿದು ನಾಲ್ಕು ದಿನಗಳೇ ಕಳೆದರೂ ಇನ್ನೂ ಆಯೋಗದ ವೆಬ್ಸೈಟ್ನಲ್ಲಿ ಈ ಕುರಿತು ಮಾಹಿತಿ ಲಭ್ಯವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
'ಕ್ಷೇತ್ರವಾರು ಮತದಾನದ ಅಂಕಿಅಂಶ, ಶೇಕಡಾವಾರು ಮತದಾನ, ಅಂಚೆಪತ್ರಗಳ ಮತದಾನದ ದತ್ತಾಂಶಗಳ ವಿವರಗಳನ್ನು ಇನ್ನು ಬಿಡುಗಡೆ ಮಾಡಿಲ್ಲ' ಎಂದು ಅವರು ಹೇಳಿದ್ದಾರೆ.
'ಚುನಾವಣಾ ಪ್ರಕ್ರಿಯೆಯಲ್ಲಿ ನಂಬಿಕೆ ಕಾಪಾಡಿಕೊಳ್ಳಲು ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯ' ಎಂದು ಅವರು ಉಲ್ಲೇಖಿಸಿದ್ದಾರೆ.
ಸಿಪಿಐ(ಎಂ) ನಾಯಕ, ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಸಹ ಆಯೋಗವನ್ನು ಟೀಕಿಸಿದ್ದು, ಇದು 'ಅಸಹಜ' ಎಂದು ಆರೋಪಿಸಿದ್ದಾರೆ.
'ಮತದಾನ ಮುಗಿದು ನಾಲ್ಕು ದಿನಗಳಾಗಿವೆ. ಆಯೋಗವು ಮತದಾನದ ದತ್ತಾಂಶ ಬಿಡುಗಡೆ ಮಾಡದಿರುವುದು ಅಸಹಜವಾಗಿದೆ' ಎಂದಿದ್ದಾರೆ.
'ಇವಿಎಂನಲ್ಲಿ ದಾಖಲಾದ ಮತಗಳು, ಅಂಚೆ ಮತಗಳು, ಸೇವಾ ಮತಗಳು, ಮನೆಯಿಂದ ಚಲಾಯಿಸಲಾದ ಮತಗಳು ಸೇರಿದಂತೆ ಮತದಾನದ ಸಮಗ್ರ ಲೆಕ್ಕವನ್ನು ತಕ್ಷಣವೇ ಬಿಡುಗಡೆ ಮಾಡಬೇಕು' ಎಂದು ಆಯೋಗವನ್ನು ಒತ್ತಾಯಿಸಿದ್ದಾರೆ.
'ತಂತ್ರಜ್ಞಾನದ ಯುಗದಲ್ಲೂ ವಿಳಂಬ ಉಂಟಾಗುತ್ತಿರುವುದು ಆಯೋಗದ ಪಾರದರ್ಶಕತೆಯ ಮೇಲೆ ಅನುಮಾನ ಉಂಟುಮಾಡುತ್ತಿದೆ' ಎಂದು ಅವರು ಹೇಳಿದ್ದಾರೆ.
ಶೇ 78ರಷ್ಟು ಮತದಾನ...
ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ, ಕೇರಳದಲ್ಲಿ ಶೇ 78.03ರಷ್ಟು ಮತದಾನ ದಾಖಲಾಗಿದೆ. ಚುನಾವಣಾ ಕಣದಲ್ಲಿರುವ ಒಟ್ಟು 883 ಅಭ್ಯರ್ಥಿಗಳ ಭವಿಷ್ಯ ಮೇ 4ರಂದು ನಿರ್ಧಾರವಾಗಲಿದೆ.

