ನವದೆಹಲಿ: ಎಲ್ಲ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇಕಡ 50ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಸಣ್ಣ ಹಾಗೂ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು, 'ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಬಗ್ಗೆ ಈಗಾಗಲೇ ಕಳವಳ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ 50ರಷ್ಟು ಹೆಚ್ಚಿಸುವುದು ನ್ಯಾಯಸಮ್ಮತವಾಗಿದೆ ಎನ್ನುವುದು ಭ್ರಮೆ' ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ಈ ಪ್ರಸ್ತಾವದಿಂದ ದಕ್ಷಿಣ ರಾಜ್ಯಗಳಿಗೆ ಹೆಚ್ಚು ಅನನುಕೂಲವಾಗಲಿದೆ ಎಂದು ಹೇಳಿದರು.
'ಸದ್ಯ ಉತ್ತರ ಪ್ರದೇಶ 80 ಮತ್ತು ತಮಿಳುನಾಡು 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ. ಪ್ರಸ್ತಾವಿತ ಮಸೂದೆಯ ಅನುಷ್ಠಾನದ ಬಳಿಕ ಉತ್ತರ ಪ್ರದೇಶದ ಕ್ಷೇತ್ರಗಳ ಸಂಖ್ಯೆ 120ಕ್ಕೆ ಏರಿಕೆಯಾಗಲಿದೆ. ತಮಿಳುನಾಡು ಕ್ಷೇತ್ರಗಳ ಸಂಖ್ಯೆ 59ಕ್ಕೆ ಹೆಚ್ಚಲಿದೆ. ಒಟ್ಟಾರೆಯಾಗಿ ದಕ್ಷಿಣದ ರಾಜ್ಯಗಳಿಗೆ 66 ಕ್ಷೇತ್ರಗಳು ಸೇರ್ಪಡೆಯಾದರೆ, ಉತ್ತರ ರಾಜ್ಯಗಳಿಗೆ 200 ಕ್ಷೇತ್ರಗಳು ಸೇರ್ಪಡೆಯಾಗಲಿವೆ' ಎಂದು ಹೇಳಿದರು.

