ಪೆರ್ಲ: ದೇಶದ 27ರಾಜ್ಯಗಳಲ್ಲಿ ಕಾಂಗ್ರೆಸ್-ಎಡರಂಗ ಹೊಂದಾಣಿಕೆದೊಂದಿಗೆ ಚುನಾವಣೆ ಎದುರಿಸುತ್ತಿದ್ದರೆ, ಕೇರಳದಲ್ಲಿಮಾತ್ರ ಪ್ರತ್ಯೇಕವಾಗಿ ಚುನಾವಣೆ ಎದುರಿಸುವ ಮೂಲಕ ಎರಡೂಪಕ್ಷಗಳು ರಾಜ್ಯದ ಜನರನ್ನು ವಂಚಿಸುತ್ತಿರುವುದಾಗಿ ಬಿಜೆಪಿ ಡೈನಾಮಿಕ್ ಲೀಡರ್ ಕೆ. ಅಣ್ಣಾಮಲೈ ತಿಳಿಸಿದ್ದಾರೆ.
ಅವರು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪರ ಪ್ರಚಾರಾರ್ಥ ಪೆರ್ಲ ಪೇಟೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರೋಡ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ ಜಿಲ್ಲೆಗೆ ಹೊಂದಿಕೊಂಡಿರುವ ಅತ್ಯುತ್ತರ ಕೇರಳದ ವಿಧಾನಸಭಾ ಕ್ಷೇತ್ರ ಮಂಜೇಶ್ವರ ಸೇರಿದಂತೆ ಕಾಸರಗೋಡು ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಬಿಜೆಪಿ ಗೆಲುವು ಇಲ್ಲಿ ಅನಿವಾರ್ಯ. ಇದು ಅಭಿವೃದ್ಧಿಗೆ ಸಂಬಂಧಿಸಿದ ಹೋರಾಟವಾಗಿದ್ದು, ಇಲ್ಲಿ ಬಿಜೆಪಿ ಗೆಲುವಿಗೆ ಪ್ರತಿಯೊಬ್ಬ ಪಣತೊಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ದೇಶದ ಅಭಿವೃದ್ಧಿ ಕನಸಿನ ಜತೆಗೆ ಮಂಜೇಶ್ವರದ ಜನತೆಯೂ ಕೈಜೋಡಿಸಿ ಕೆ. ಸುರೇಂದ್ರನ್ ಅವರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸುವಂತೆ ಮನವಿ ಮಾಡಿದರು.
ಪೆರ್ಲ ಚೆಕ್ಪೋಸ್ಟ್ ವಠಾರದ ಶ್ರೀಮಾತಾ ಆರ್ಕೇಡ್ ವಠಾರದಿಂದ ಬೃಹತ್ ರೋಡ್ಶೋ ಪೆರ್ಲ ಪೇಟೆ ವರೆಗೆ ನಡೆಯಿತು. ಚೆಂಡೆಮೇಳ, ಸಿಂಗಾರಿ ಮೇಳದೊಂದಿಗೆ ಸಾಗಿಬಂದ ಮೆರವಣಿಗೆಯಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಪಾಲ್ಗೊಂಡಿದ್ದರು.
ಅಭ್ಯರ್ಥಿ ಕೆ. ಸುರೇಂದ್ರನ್, ಮುಖಂಡರಾದ ವಿ. ರವೀಂದ್ರನ್, ವಿ. ಬಾಲಕೃಷ್ಣ ಶೆಟ್ಟಿ, ಸತೀಶ್ಚಂದ್ರ ಭಂಡಾರಿ, ಸುಳ್ಯ ಶಾಸಕಿ ಭಾಗೀರಥೀ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಶಾಸಕ ಡಾ. ಭರತ್ ಶೆಟ್ಟಿ, ಬಿಜೆಪಿ ಎಣ್ಮಕಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ರಮಾನಂದ ಎಡಮಲೆ ಮೊದಲಾದವರು ಉಪಸ್ಥಿತರಿದ್ದರು.ಈ ಸಂದರ್ಭ ವಿವಿಧ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡವರನ್ನು ಪಕ್ಷಕ್ಕೆ ಶಾಲುಹೊದಿಸಿ ಬರಮಾಡಿಕೊಳ್ಳಲಾಯಿತು.



