ಕಾಸರಗೋಡು: ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ಜಿಲ್ಲೆಯಲ್ಲಿ ಸಜ್ಜುಗೊಳಿಸಲಾದ ಮಾದರಿ ಮತಗಟ್ಟೆಗಳು ಜನಮನ್ನಣೆಗೆ ಕಾರಣವಾಯಿತು. ಹಸಿರು ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಿ ಸ್ಥಾಪಿಸಲಾದ ಈ ಮತಗಟ್ಟೆಗಳು ಮತದಾರರಿಗೆ ಹೃದಯಸ್ಪರ್ಶಿ ಮತ್ತು ಹಸಿರು ಅನುಭವವನ್ನು ನೀಡಿತು.
(ಮಧೂರು ಗ್ರಾಪಂ ವ್ಯಾಪ್ತಿಯ ಕೂಡ್ಲು ಶ್ರೀಗೋಪಾಲಕೃಷ್ಣ ಶಾಲೆಯಲ್ಲಿ ಹಸಿರು ಸಂಹಿತೆಯೊಂದಿಗೆ ಸಜ್ಜುಗೊಳಿಸಲಾದ ಮತಗಟ್ಟೆಯಲ್ಲಿನ ಸರತಿಸಾಲು.)ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕೇಂದ್ರಗಳಲ್ಲಿ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಯಿತು. ಮಂಜೇಶ್ವರಂ ಕ್ಷೇತ್ರದಲ್ಲಿ, ಪೈವಳಿಗೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಾಸರಗೋಡು ವಿದ್ಯಾಗಿರಿಯಲ್ಲಿ ಎಸ್ಎಂಬಿಎಂ ಪಂಚಾಯಿತಿ ಯುಪಿ ಶಾಲೆ, ಉದುಮ ಬಾರ ಜಿಡಬ್ಲ್ಯೂ ಎಲ್ಪಿ ಶಾಲೆ ಮತ್ತು ಕಾಞಂಗಾಡ್ನ ರಾವಣೇಶ್ವರಂ ಜಿಎಚ್ಎಸ್ಎಸ್, ನೀಲೇಶ್ವರ ಸರ್ಕಾರಿ ಎಲ್ಪಿ ಶಾಲೆ ಹಾಗೂ ತ್ರಿಕರಿಪುರ ಕ್ಷೇತ್ರದಲ್ಲಿ ಮಾದರಿ ಮತಗಟ್ಟೆ ನಿರ್ಮಿಸಲಾಗಿತ್ತು.
ಹಳೇ ಶೈಲಿಯ ಕುರ್ಚಿಗಳು ಮತ್ತು ಗತಕಾಲದ ವೈಭವವನ್ನು ಮೆಲುಕು ಹಾಕುವ ರೇಡಿಯೊದೊಂದಿಗೆ ಸ್ಥಾಪಿಸಲಾದ ಮತಗಟ್ಟೆಗಳನ್ನು ಮತದಾರರು ಕುತೂಹಲದಿಂದ ವೀಕ್ಷಿಸಿದರು. ಪ್ಲಾಸ್ಟಿಕ್ ಬಳಕೆಯಿಲ್ಲದೆ ತರಗೆಲೆ, ತೆಂಗಿನಗರಿ ಮತ್ತು ನೈಸರ್ಗಿಕ ವಸ್ತುಬಳಸಿ ನಿರ್ಮಿಸುವ ಮೂಲಕ ಈ ಬೂತ್ಗಳು ಪರಿಸರ ಸಂರಕ್ಷಣೆಯ ಸಂದೇಶ ರವಾನಿಸಿತು. ಮಹಿಳೆಯರು ಮಾತ್ರ ಅಧಿಕಾರಿಗಳಾಗಿ, ಭದ್ರತೆ ಮತ್ತು ಶುಚೀಕರಣ ಕಾರ್ಯ ನಿರ್ವಹಿಸುತ್ತಿದ್ದ 'ಪಿಂಕ್ ಬೂತ್'ಗಳೂ ಗಮನಸೆಳೆಯಿತು.
ಮತಗಟ್ಟೆಗಳಲ್ಲಿ ಬಾಯಾರಿಕೆ ತಣಿಸಲು ನೀರು ಮತ್ತು ವಿಶ್ರಾಂತಿ ಪಡೆಯಲು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಹಿರಿಯ ನಾಗರಿಕರು ಮತ್ತು ಅಂಗವಿಕಲರು ಯಾವುದೇ ಅಡೆತಡೆಯಿಲ್ಲದೆ ಮತ ಚಲಾಯಿಸಲು ಮತಗಟ್ಟೆಯಲ್ಲಿ ಸೌಲಭ್ಯಗಳನ್ನು ಸಹ ಒದಗಿಸಲಾಗಿತ್ತು.
(ಕುಂಬಳೆ ಎಎಸ್ಬಿಎಸ್ನಲ್ಲಿ 167ನೇ ಮತಗಟ್ಟೆಯಲ್ಲಿ ಸಜ್ಜುಗೊಳಿಸಲಾದ ಪಿಂಕ್ ಬೂತ್.)


