HEALTH TIPS

ಮುಂಬರುವ ವಿಧಾನಸಭೆ ಚುನಾವಣೆಗೆ ಟಿಎಂಸಿ ಕಾರ್ಯತಂತ್ರ ಕದಿಯಲು ಇ.ಡಿ ದಾಳಿ: ಮಮತಾ

ನವದೆಹಲಿ/ಕೋಲ್ಕತ್ತ: 'ಟಿಎಂಸಿ ಮುಂಬರುವ ವಿಧಾನಸಭಾ ಚುನಾವಣೆಗೆ ರೂಪಿಸಿರುವ ಕಾರ್ಯತಂತ್ರವನ್ನು ಕದಿಯುವ ಉದ್ದೇಶದಿಂದ ಜಾರಿ ನಿರ್ದೇಶನಾಲಯದ (ಇ.ಡಿ) ದಾಳಿ ನಡೆದಿದೆ' ಎಂದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ರಾಜಕೀಯ ಸಲಹಾ ಸಂಸ್ಥೆ 'ಐ-ಪ್ಯಾಕ್' ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್‌ ಜೈನ್‌ ಅವರ ನಿವಾಸದ ಮೇಲೆ ನಡೆದ ಇ.ಡಿ ದಾಳಿಯನ್ನು ಖಂಡಿಸಿ ಟಿಎಂಸಿ ಕೋಲ್ಕತ್ತದಲ್ಲಿ ಶುಕ್ರವಾರ ಆಯೋಜಿಸಿದ ಬೃಹತ್‌ ಪ್ರತಿಭಟನಾ ರ್‍ಯಾಲಿಯಲ್ಲಿ ಅವರು ಮಾತನಾಡಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರು ಕಲ್ಲಿದ್ದಲು ಹಗರಣದಿಂದ ಲಾಭ ಗಳಿಸಿದ್ದಾರೆ ಎಂದು ಆರೋಪಿಸಿದ ಅವರು, 'ಅಗತ್ಯ ಬಿದ್ದರೆ ಎಲ್ಲ ಸಾಕ್ಷ್ಯಗಳನ್ನು ಬಹಿರಂಗಪಡಿಸುತ್ತೇನೆ' ಎಂದು ಹೇಳಿದರು.

ಸುವೇಂದು ಅಧಿಕಾರಿ ಸೇರಿದಂತೆ ಈಗ ಬಿಜೆಪಿಯೊಂದಿಗೆ ಇರುವ ಟಿಎಂಸಿ ನಾಯಕರನ್ನು ಉಲ್ಲೇಖಿಸಿದ ಮಮತಾ, 'ಕಲ್ಲಿದ್ದಲು ಹಗರಣದ ಜಾಲದಲ್ಲಿ ಎಲ್ಲರೂ ಇದ್ದಾರೆ' ಎಂದು ಆರೋಪಿಸಿದರು.

'ಈಗ ಅವರು ಕಲ್ಲಿದ್ದಲು ಹಗರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಕಲ್ಲಿದ್ದಲು ಹಗರಣದ ಹಣ ತಿಂದವರು ಯಾರು? ಆ ಹಣ ಎಲ್ಲಿಗೆ ಹೋಗುತ್ತದೆ? ಅದರ ಹಿಂದೆ 'ದೇಶದ್ರೋಹಿ'ಗಳ ಜಾಲ ಇದೆ. ಜಗನ್ನಾಥ್‌-ಸುವೇಂದು ಅಧಿಕಾರಿ-ಅಮಿತ್‌ ಶಾ ಸೇರಿದಂತೆ ಒಂದು ಸರಪಳಿ ಇದೆ. ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಒಳಗೊಂಡ ಪೆನ್‌ಡ್ರೈವ್‌ ನನ್ನಲ್ಲಿದೆ. ಸಮಯ ಬಂದಾಗ ಅದನ್ನು ಬಹಿರಂಗಪಡಿಸುವೆ' ಎಂದರು.

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಗುರುವಾರ ಇ.ಡಿ ದಾಳಿ ನಡೆದಿದೆ. ಈ ವೇಳೆ ಸ್ಥಳಕ್ಕೆ ಧಾವಿಸಿ ಬಂದಿದ್ದ ಮಮತಾ ಅವರು ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದರು.

ಶೋಧ ನಡೆಯುತ್ತಿದ್ದ ಸ್ಥಳಕ್ಕೆ ಬಂದದ್ದನ್ನು ಸಮರ್ಥಿಸಿಕೊಂಡ ಮಮತಾ, 'ಯಾರಾದರೂ ನನ್ನನ್ನು ಕೊಲ್ಲಲು ಪ್ರಯತ್ನಿಸಿದರೆ, ಅವರಿಂದ ರಕ್ಷಿಸಿಕೊಳ್ಳುವ ಹಕ್ಕು ನನಗಿಲ್ಲವೇ? ನನ್ನ ಪಕ್ಷ ಅಸ್ತಿತ್ವ ಕಳೆದುಕೊಂಡರೆ, ನಾನು ಜನರಿಗಾಗಿ ಹೋರಾಡುವುದು ಹೇಗೆ?' ಎಂದರು.

ಮಮತಾ ದೂರು: 'ಐ-ಪ್ಯಾಕ್‌' ಮೇಲಿನ ದಾಳಿಗೆ ಸಂಬಂಧಿಸಿದಂತೆ ಮಮತಾ ಅವರು ಶುಕ್ರವಾರ ಇ.ಡಿಯ ಅಪರಿಚಿತ ಅಧಿಕಾರಿಗಳು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ವಿರುದ್ಧ ಕೋಲ್ಕತ್ತದ ಶೇಕ್ಸ್‌ಪಿಯರ್‌ ಸಾರಣಿ ಪೊಲೀಸ್‌ ಠಾಣೆ ಹಾಗೂ ಬಿಧಾನ್‌ನಗರದ ಎಲೆಕ್ಟ್ರಾನಿಕ್‌ ಕಾಂಪ್ಲೆಕ್ಸ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 'ಅವರ ದೂರಿನಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿದ್ದಾರೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆದರಿಕೆ, ಕಳ್ಳತನ ಮತ್ತು ಅತಿಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹಾಗೂ ಐ.ಟಿ ಕಾಯ್ದೆಯ ಸೆಕ್ಷನ್ 66ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಟಿಎಂಸಿ ಸಂಸದ ಡೆರೆಕ್ ಒಬ್ರಯಾನ್‌ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು -ಪಿಟಿಐ ಚಿತ್ರರವಿ ಶಂಕರ್‌ ಪ್ರಸಾದ್ ಬಿಜೆಪಿ ನಾಯಕಮಮತಾ ನಡೆಯ ಸುತ್ತ ಹಲವು ಅನುಮಾನಗಳು ಹುಟ್ಟಿವೆ. ಅವರು ಪಕ್ಷಕ್ಕೆ ಸಂಬಂಧಿಸಿದ ಸೂಕ್ಷ್ಮವಾದ ಏನನ್ನೋ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆಮಮತಾ ಬ್ಯಾನರ್ಜಿ ಮುಖ್ಯಮಂತ್ರಿನಾನು ಟಿಎಂಸಿ ಮುಖ್ಯಸ್ಥೆಯಾಗಿದ್ದುಕೊಂಡು ಆ ಕೆಲಸ (ದಾಳಿ ಸ್ಥಳಕ್ಕೆ ಬಂದದ್ದು) ಮಾಡಿದ್ದೇನೆ. ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿಲ್ಲ

ಸಿಬಿಐ ತನಿಖೆಗೆ ಇ.ಡಿ ಆಗ್ರಹ

ಮಮತಾ ಬ್ಯಾನರ್ಜಿ ಮತ್ತು ಕೋಲ್ಕತ್ತದ ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಕೋರಿ ಜಾರಿ ನಿರ್ದೇಶನಾಲಯ ಕಲ್ಕತ್ತಾ ಹೈಕೋರ್ಟ್‌ ಮೊರೆಹೋಗಿದೆ. ಮಮತಾ ಅವರು ಪೊಲೀಸ್‌ ಅಧಿಕಾರಿಗಳನ್ನು ಬಳಸಿಕೊಂಡು ಇ.ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸರ್ಕಾರದ ಉನ್ನತ ಹುದ್ದೆಯಲ್ಲಿರುವವರು ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಪೊಲೀಸರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಆರೋಪಿಸಿದೆ. 'ಪ್ರಸ್ತುತ ಪ್ರತಿವಾದಿಗಳಾದ ಮುಖ್ಯಮಂತ್ರಿ ಪೊಲೀಸ್ ಅಧಿಕಾರಿಗಳು ಮತ್ತು ಇದರ ಹಿಂದೆ ಒಂದು ತಂಡವಾಗಿ ಕೆಲಸ ಮಾಡಿದ ಎಲ್ಲ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸಬೇಕು' ಎಂದು ಅರ್ಜಿಯಲ್ಲಿ ಕೋರಿದೆ. ಶೋಧ ನಡೆಸುತ್ತಿದ್ದ ಸ್ಥಳದಿಂದ 'ಕಾನೂನುಬಾಹಿರವಾಗಿ ಮತ್ತು ಬಲವಂತವಾಗಿ' ತೆಗೆದುಕೊಂಡು ಹೋಗಿರುವ ಎಲ್ಲಾ ಡಿಜಿಟಲ್ ಸಾಧನಗಳು ಎಲೆಕ್ಟ್ರಾನಿಕ್ ದಾಖಲೆಗಳು ಮತ್ತು ಕಡತಗಳನ್ನು ತಕ್ಷಣವೇ ವಾಪಸ್‌ ಪಡೆದು ಇ.ಡಿ ವಶಕ್ಕೆ ಒಪ್ಪಿಸಬೇಕು ಎಂದೂ ಒತ್ತಾಯಿಸಿದೆ.

ವಿಚಾರಣೆ 14ಕ್ಕೆ ಮುಂದೂಡಿಕೆ

'ಐ-ಪ್ಯಾಕ್‌' ಕಚೇರಿ ಮೇಲಿನ ಇ.ಡಿ ದಾಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಕಲ್ಕತ್ತಾ ಹೈಕೋರ್ಟ್ ಜನವರಿ 14ಕ್ಕೆ ಮುಂದೂಡಿದೆ. ನ್ಯಾಯಾಲಯದ ಕೊಠಡಿಯಲ್ಲಿ ಶುಕ್ರವಾರ ಗದ್ದಲ ಉಂಟಾದ್ದರಿಂದ ನ್ಯಾಯಮೂರ್ತಿ ಸುವ್ರಾ ಘೋಷ್‌ ಅವರು ವಿಚಾರಣೆ ಮುಂದೂಡಿದರು. ಇ.ಡಿ ಮತ್ತು ಟಿಎಂಸಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಅವರು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿತ್ತು. ಆದರೆ ವಕೀಲರು ಹಾಗೂ ಕಕ್ಷಿದಾರರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನ ಸೇರಿದ್ದರು. ಅರ್ಜಿಗಳೊಂದಿಗೆ ಸಂಬಂಧವಿಲ್ಲದವರು ಕೊಠಡಿಯಿಂದ ಹೊರಹೋಗುವಂತೆ ನ್ಯಾಯಮೂರ್ತಿ ಸುವ್ರಾ ಘೋಷ್‌ ಮನವಿ ಮಾಡಿದರೂ ಅಲ್ಲಿದ್ದವರು ಕಿವಿಗೊಡಲಿಲ್ಲ. ಇದರಿಂದ ವಿಚಾರಣೆಯನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು. ತನಿಖೆಯಲ್ಲಿ ಹಸ್ತಕ್ಷೇಪ ನಡೆಸಲಾಗಿದೆ ಎಂದು ಆರೋಪಿಸಿ ಇ.ಡಿ ನ್ಯಾಯಾಲಯದ ಮೆಟ್ಟಿಲೇರಿದರೆ ಟಿಎಂಸಿಯು ಇ.ಡಿ ಶೋಧದ ಕಾನೂನುಬದ್ಧತೆಯನ್ನು ಪ್ರಶ್ನಿಸಿದೆ. 'ಶೋಧದ ಸಮಯದಲ್ಲಿ ಇ.ಡಿ ವಶಪಡಿಸಿಕೊಂಡ ದಾಖಲೆಗಳು ದುರುಪಯೋಗವಾಗುವುದನ್ನು ತಡೆಯಬೇಕು' ಎಂದು ಟಿಎಂಸಿ ಕೋರಿದೆ. ಇ.ಡಿ ತನ್ನ ಅರ್ಜಿಯಲ್ಲಿ ಮಮತಾ ಅವರನ್ನೂ ಟಿಎಂಸಿಯು ಕೇಂದ್ರ ಸರ್ಕಾರವನ್ನೂ ಪ್ರತಿವಾದಿಯನ್ನಾಗಿಸಿದೆ.

ಟಿಎಂಸಿ ಸಂಸದರ ಪ್ರತಿಭಟನೆ

ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ನವದೆಹಲಿಯಲ್ಲಿ ಗೃಹ ಸಚಿವಾಲಯದ ಕಚೇರಿಯ ಹೊರಗೆ ಶುಕ್ರವಾರ ಪ್ರತಿಭಟನೆ ನಡೆಸಿದ ಟಿಎಂಸಿ ಸಂಸದರನ್ನು ಪೊಲೀಸರು ವಶಕ್ಕೆ ಪಡೆದರು. ಡೆರೆಕ್‌ ಒಬ್ರಯಾನ್‌ ಮಹುವಾ ಮೊಯಿತ್ರಾ ಮತ್ತು ಶತಾಬ್ದಿ ರಾಯ್‌ ಸೇರಿದಂತೆ ಪ್ರತಿಭಟನೆ ನಡೆಸಿದ ಟಿಎಂಸಿಯ ಎಂಟು ಸಂಸದರನ್ನು ಪೊಲೀಸರು ಬಲ ಪ್ರಯೋಗಿಸಿ ವಶಕ್ಕೆ ಪಡೆದರು. 'ಗೃಹ ಸಚಿವಾಲಯದ ಕಚೇರಿಯ ಹೊರಗೆ ಪ್ರತಿಭಟನೆಗಳಿಗೆ ಅವಕಾಶವಿಲ್ಲದ ಕಾರಣ ಸಂಸದರನ್ನು ವಶಕ್ಕೆ ಪಡೆದು ಪಾರ್ಲಿಮೆಂಟ್‌ ಸ್ಟ್ರೀಟ್‌ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಮಧ್ಯಾಹ್ನ 3ರ ವೇಳೆಗೆ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು' ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries