ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನಂತರ ಮತದಾರರ ಪಟ್ಟಿಯಿಂದ ತನ್ನ ಹೆಸರು ಅಳಿಸಿಹಾಕಿದ್ದರ ವಿರುದ್ಧ ಕೋಲ್ಕತ್ತದಲ್ಲಿ ಹೊಸದಾಗಿ ರಚಿಸಿರುವ ಮೇಲ್ಮನವಿ ನ್ಯಾಯಾಧಿಕರಣವನ್ನು ಸಂಪರ್ಕಿಸಲು ಕಾಂಗ್ರೆಸ್ನ ಸಂಭಾವ್ಯ ಅಭ್ಯರ್ಥಿ ಮೊತಾಬ್ ಶೇಖ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
ಮೊತಾಬ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು ನಡೆಸುತ್ತಿದೆ. 'ಹೆಸರನ್ನು ತೆಗೆದುಹಾಕಲು ಸಿದ್ಧಪಡಿಸಿದ ಪಟ್ಟಿ'ಯಲ್ಲಿ ತಮ್ಮ ಹೆಸರು ಸೇರಿಸಿರುವುದನ್ನು ಮೊತಾಬ್ ಅವರು ಪ್ರಶ್ನಿಸಿದ್ದರು. ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಮರು ಸೇರ್ಪಡೆ ಮಾಡಲು ಮತ್ತು ಚುನಾವಣೆಗೆ ನಾಮಪತ್ರ ಸಲ್ಲಿಸಲು ಅವರು ಅನುಮತಿ ಕೋರಿದ್ದಾರೆ.
ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿಗಳ ನೇತೃತ್ವದ ಮೇಲ್ಮನವಿ ನ್ಯಾಯಾಧಿಕರಣಗಳು ಗುರುವಾರದಿಂದ ಕಾರ್ಯಾರಂಭ ಮಾಡಿವೆ. ಇದನ್ನು ಗಮನಿಸಿದ ನ್ಯಾಯಪೀಠವು, ಸಂಬಂಧಪಟ್ಟ ಈ ನ್ಯಾಯಾಧಿಕರಣಕ್ಕೆ ತಮ್ಮ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದೆ.
ಮೊತಾಬ್ ಅವರು ಕಲ್ಕತ್ತಾ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ನೇತೃತ್ವದ ಮೇಲ್ಮನವಿ ನ್ಯಾಯಾಧಿಕರಣವನ್ನು ಸಂಪರ್ಕಿಸಬಹುದು ಎಂದು ಸಿಜೆಐ ತಿಳಿಸಿದ್ದಾರೆ.
ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 6ರಂದು ನಡೆಯಲಿದ್ದು, ಅಷ್ಟರೊಳಗೆ ಚುನಾವಣಾ ಆಯೋಗದ ನೆರವಿನೊಂದಿಗೆ ಈ ಮೇಲ್ಮನವಿಯನ್ನು ಪರಿಶೀಲಿಸಿ ತೀರ್ಮಾನಿಸುವಂತೆ ನ್ಯಾಯಪೀಠವು ನ್ಯಾಯಾಧಿಕರಣದ ಅಧ್ಯಕ್ಷರನ್ನು ವಿನಂತಿಸಿದೆ.

