ಚೆನ್ನೈ: ತಮಿಳುನಾಡು ವಿಧಾನಸಭೆಯ ಚುನಾವಣಾ ಫಲಿತಾಂಶ ಬಂದು 6 ದಿನಗಳ ಕಸರತ್ತಿನ ಬಳಿಕ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎಂಜಿಆರ್ ನಂತರ ತಮಿಳುನಾಡಿನಲ್ಲಿ ಹೊಸ ಯುಗ ಆರಂಭಿಸಿರುವ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೂ ಕೆಲ ವಿಶೇಷತೆಗಳಿದ್ದವು.
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮತ್ತು ಸ್ವೀಕಾರದ ನಂತರ ರಾಷ್ಟ್ರಗೀತೆಗೆ ಮೊದಲು ವಂದೇ ಮಾತರಂನ ಆರೂ ಚರಣಗಳನ್ನು ಹಾಡುವ ಮೂಲಕ ಹೊಸ ಆರಂಭ ಮಾಡಿದ್ದಾರೆ. ವಂದೇ ಮಾತರಂನ ಆರೂ ಚರಣಗಳನ್ನು ಹಾಡುವ ಕುರಿತಂತೆ ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಮಾರ್ಗಸೂಚಿ ಅನ್ವಯವೇ ವಂದೇ ಮಾತರಂ ಹಾಡಲಾಗಿದೆ.
1882ರಲ್ಲಿ ಬಂಗಾಳಿಯ ಶ್ರೇಷ್ಠ ಕವಿ, ಕಾದಂಬರಿಕಾರರಾದ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ರಚಿಸಿರುವ ಈ ರಾಷ್ಟ್ರೀಯ ಗೀತೆಯನ್ನು ಶನಿವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಕೇಂದ್ರ ಸಚಿವರು ಭಾಗವಹಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೂ ಹಾಡಿರಲಿಲ್ಲ.
ಜನವರಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಂದೇ ಮಾತರಂ ಕುರಿತು ಹೊರಡಿಸಿದ್ದ ನಿರ್ದೇಶನವು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಈ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದವು. ಆದರೆ, ಇಂದಿನ ಸಮಾರಂಭದಲ್ಲಿ ರಾಹುಲ್ ಗಾಂಧಿ ಮತ್ತು ವಿಜಯ್ ಅವರ ಸಮ್ಮುಖದಲ್ಲಿಯೇ ರಾಷ್ಟ್ರಗೀತೆಗೆ ಮೊದಲು ವಂದೇ ಮಾತರಂ ಹಾಡಲಾಯಿತು. ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದ ರಾಹುಲ್, ವಿಜಯ್ ಎದ್ದು ನಿಂತು ಗೌರವ ಸಲ್ಲಿಸಿದರು. ವಂದೇ ಮಾತರಂ ಮತ್ತು ಜನ ಗಣ ಮನದ ನಂತರ, ಕೊನೆಯಲ್ಲಿ ನಾಡ ಗೀತೆ 'ತಮಿಳ್ ತಾಯ್ ವಾಳ್ತು' ಅನ್ನು ಹಾಡಲಾಯಿತು.
ಏಪ್ರಿಲ್ 23ರಂದು ತಮಿಳುನಾಡು ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. 234 ಸದಸ್ಯ ಬಲದ ವಿಧಾನಸಭೆಯಲ್ಲಿ 108 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಟಿವಿಕೆಗೆ ಸರ್ಕಾರ ರಚಿಸಲು ಬೇಕಾದಷ್ಟು ಸಂಖ್ಯೆ ಇರಲಿಲ್ಲ. ಹಾಗಾಗಿ, 6 ದಿನಗಳಿಂದ ಸಣ್ಣ ಪಕ್ಷಗಳ ಜೊತೆ ನಿರಂತರ ಮಾತುಕತೆ ನಡೆಸಿದ್ದ ವಿಜಯ್, ಕೊನೆಗೂ ಬಹುಮತ ಸಾಧಿಸಿದ್ದರು. ಕಾಂಗ್ರೆಸ್ನ ಐವರು, ಸಿಪಿಎಂ, ಸಿಪಿಎಂ(ಐ), ಸಿವಿಕೆ ಮತ್ತು ಐಯುಎಂಎಲ್ನ ತಲಾ ಇಬ್ಬರು ಶಾಸಕರು ಬೆಂಬಲ ನೀಡುವುದರೊಂದಿಗೆ ವಿಜಯ್ ಅವರಿಗೆ 120 ಶಾಸಕರ ಬಲ ಸಿಕ್ಕಿತ್ತು.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶಗಳ ನಂತರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ರಾಷ್ಟ್ರಗೀತೆ ಜನ ಗಣ ಮನಕ್ಕೆ ಸಮಾನವಾದ ಸ್ಥಾನಮಾನ ನೀಡುವ ಪ್ರಸ್ತಾಪವನ್ನು ಅನುಮೋದಿಸಿತ್ತು.
ಫೆಬ್ರುವರಿಯಲ್ಲಿ ಪಶ್ಚಿಮ ಬಂಗಾಳದ ಆಗಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವಂದೇ ಮಾತರಂ ಕುರಿತ ಕೇಂದ್ರದ ನಿರ್ದೇಶನವನ್ನು ರವೀಂದ್ರನಾಥ ಟ್ಯಾಗೋರ್ ಅವರಿಗೆ ಮಾಡಿದ ಅವಮಾನ ಎಂದು ಕರೆದಿದ್ದರು ಟ್ಯಾಗೋರ್ ಅವರು ಬರೆದಿರುವ ರಾಷ್ಟ್ರಗೀತೆಯನ್ನು ವಂದೇ ಮಾತರಂ ನಂತರ ಹಾಡಬಾರದು ಎಂದು ವಾದಿಸಿದ್ದರು.
ಜನವರಿ 28 ರಂದು ಕೇಂದ್ರದ ಗೃಹ ವ್ಯವಹಾರಗಳ ಸಚಿವಾಲಯದಿಂದ ಬಿಡುಗಡೆಯಾದ ನಿರ್ದೇಶನದಲ್ಲಿ ಮೂಲ ವಂದೇ ಮಾತರಂನ ಭಾಗವಾಗಿದ್ದ ಎಲ್ಲ ಆರು ಚರಣಗಳನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಬೇಕೆಂದು ಸೂಚಿಸಲಾಗಿತ್ತು. 1950ರ ಸಂವಿಧಾನ ಸಭೆಯು ವಂದೇ ಮಾತರಂನ ಎರಡು ಚರಣಗಳನ್ನು ಮಾತ್ರ ಹಾಡುವುದಕ್ಕೆ ಅನುಮೋದನೆ ನೀಡಿತ್ತು,
ಸಾಂಪ್ರದಾಯಿಕ ಧೋತಿಗೆ ಕೊಕ್
ಈ ಹಿಂದೆಲ್ಲ ಮುಖ್ಯಮಂತ್ರಿ ಸ್ಥಾನಕ್ಕೇರುವ ನಾಯಕರು ಬಿಳಿ ಧೋತಿ, ಅಂಗಿಯನ್ನು ಧರಿಸಿ ಪಕ್ಕಾ ರಾಜಕಾರಣಿಗಳಂತೆ ಪ್ರಮಾಣವಚನ ಸ್ವೀಕರಿಸುತ್ತಿದ್ದರು. ಆದರೆ, ವಿಜಯ್ ಅವರು ಕಪ್ಪು ಸೂಟ್ ಧರಿಸಿ ವೃತ್ತಿಪರರ ರೀತಿ ಪ್ರಮಾಣವಚನ ಸ್ವೀಕರಿಸಿದರು. ಇದೂ ಸಹ ಎಲ್ಲರ ಗಮನ ಸೆಳೆದಿತ್ತು.

