ಮುಂಬೈ (PTI): 'ಅಗ್ನಿವೀರರು ಸಾಮಾನ್ಯ ಯೋಧರ ಸಮಾನ ಸ್ಥಾನಮಾನ ಹೊಂದಿಲ್ಲ. ಆದ್ದರಿಂದ, ಅಗ್ನಿವೀರರು ಕರ್ತವ್ಯದ ವೇಳೆ ಮೃತಪಟ್ಟರೆ, ಅವರ ಕುಟುಂಬಸ್ಥರು ಸಾಮಾನ್ಯ ಯೋಧರಿಗೆ ಸಿಗುವ ರೀತಿಯಲ್ಲೇ ಪಿಂಚಣಿ ಸೌಲಭ್ಯ ನೀಡುವಂತೆ ಹಕ್ಕು ಮಂಡಿಸಲು ಸಾಧ್ಯವಿಲ್ಲ' ಎಂದು ಕೇಂದ್ರ ಸರ್ಕಾರವು ಹೈಕೋರ್ಟ್ಗೆ ತಿಳಿಸಿದೆ.
ಮೃತ ಅಗ್ನಿವೀರ ಮುರಳಿ ನಾಯಕ್ ಅವರ ತಾಯಿ ಸಲ್ಲಿಸಿದ್ದ ಅರ್ಜಿ ವಿರುದ್ಧ ಕೇಂದ್ರ ಸರ್ಕಾರವು ಕಳೆದ ವಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ, 'ಅಗ್ನಿಪಥ್ ಯೋಜನೆಯು ಇಂದಿನ ರಾಷ್ಟ್ರೀಯ ಭದ್ರತಾ ಅಗತ್ಯಗಳಿಗಾಗಿ ರೂಪಿಸಲಾದ ಅಲ್ಪಾವಧಿಯ ಸೇವೆ ಆಗಿದೆ. ಹೀಗಾಗಿ, ಯೋಧರು ಮತ್ತು ಅಗ್ನಿವೀರರ ನಡುವಿನ ವ್ಯತ್ಯಾಸವು ಸಾಂವಿಧಾನಿಕವಾಗಿ ಮಾನ್ಯವಾಗಿದೆ' ಎಂದು ಹೇಳಿದೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ಗಡಿಯಾಚೆಯಿಂದ ನಡೆದ ಶೆಲ್ ದಾಳಿಯಲ್ಲಿ ಮುರಳಿ ನಾಯಕ್ ಮೃತಪಟ್ಟಿದ್ದರು. ಅವರ ತಾಯಿ ಜ್ಯೋತಿಬಾಯಿ ನಾಯಕ್, 'ಅಗ್ನಿವೀರರು ಸಾಮಾನ್ಯ ಯೋಧರಂತೆಯೇ ಕರ್ತವ್ಯ ನಿರ್ವಹಿಸುತ್ತಾರೆ, ಅಪಾಯವನ್ನೂ ಎದುರಿಸುತ್ತಾರೆ. ಹೀಗಾಗಿ, ಯೋಧರಿಗೆ ನೀಡುವಂತೆ ಸೌಲಭ್ಯ ಕಲ್ಪಿಸಬೇಕು' ಎಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ.

