ಬದಿಯಡ್ಕ: ಕಳೆದ ಕೆಲವು ಶತಮಾನಗಳ ಮೊದಲು ಸಂಪೂರ್ಣವಾಗಿ ಜೀರ್ಣವಾಗಿದ್ದ ಮಾನ್ಯ ಶ್ರೀ ಮಹಾದೇವನ ಸಾನ್ನಿಧ್ಯದ ಪುನರುತ್ಥಾನದ ಭಾಗವಾಗಿ ನಡೆಯುವ ಅಷ್ಟಮಂಗಲ ಪ್ರಶ್ನೆಯ ನಿವೃತ್ತಿ ರಾಶಿ ಚಿಂತನೆ ಹಾಗೂ ನಿಧಿ ಸಂಚಯನದ ಆಮಂತ್ರಣ ಪತ್ರಿಕೆಯನ್ನು ಶ್ರೀ ಎಡನೀರು ಮಠದಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು.
ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಪರಮಪೂಜ್ಯ ಶ್ರೀ ಸಚ್ಚಿದಾನಮದ ಭಾರತೀ ಶ್ರೀಗಳು ಯಕ್ಷಗಾನ ಅಷ್ಟಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು. ಶ್ರೀ ಮಹಾದೇವ ದೇವಸ್ಥಾನದ ಮಾನ್ಯ ಇದರ ಪದಾಧಿಕಾರಿಗಳಾದ ಶ್ರೀಕೃಷ್ಣ ಭಟ್ ಪುದುಕೋಳಿ, ಮಹೇಶ್ ವಳಕ್ಕುಂಜ, ರವಿಶಂಕರ ಎಂ.ಮಾನ್ಯ, ಗೋಪಾಲ ಭಟ್ ಪಿ.ಎಸ್., ವೆಂಕಟ್ರಮಣ ಸಿ.ಎಚ್., ವಿಜಯ ಕುಮಾರ್ ಮಾನ್ಯ ಉಪಸ್ಥಿತರಿದ್ದರು. ಅಷ್ಟಮಂಗಲ ಪ್ರಶ್ನೆಯ ನಿವೃತ್ತಿ ರಾಶಿ ಚಿಂತನೆ ಹಾಗೂ ನಿಧಿ ಸಂಚಯನ ಕಾರ್ಯಕ್ರಮವು ಆಗಸ್ಟ್ 21 ರಂದು ಶುಕ್ರವಾರ ಸಾನ್ನಿಧ್ಯ ಸ್ಥಳದಲ್ಲಿ ಜರಗಲಿದೆ.



