ಹೈದರಾಬಾದ್: ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐನ ಕೇಂದ್ರೀಯ ಸಮಿತಿಯ ಹಿರಿಯ ಸದಸ್ಯ ಪಸುನೂರಿ ನರಹರಿ ಅಲಿಯಾಸ್ ವಿಶ್ವನಾಥ್ ತೆಲಂಗಾಣದ ಪೊಲೀಸ್ ಮಹಾ ನಿರ್ದೇಶಕ ಸಿ.ವಿ.ಆನಂದ್ ಅವರ ಎದುರು ಮಂಗಳವಾರ ಶರಣಾದರು.
ನರಹರಿ (64) ಸಿಪಿಐನ ಬಿಹಾರ-ಜಾರ್ಖಂಡ್ ವಿಶೇಷ ಪ್ರದೇಶ ಸಮಿತಿಯ ಕಾರ್ಯದರ್ಶಿ ಆಗಿದ್ದರು.
ಶಸ್ತ್ರಾಸ್ತ್ರಗಳ ರಿಪೇರಿ ಮಾಡುವಲ್ಲಿಯೂ ನಿಪುಣರಾಗಿದ್ದರು. ನರಹರಿ ಅವರ ಶರಣಾಗತಿಯು ಸಿಪಿಐಗಾದ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಂಘಟನೆಯ ರಾಜ್ಯ ಸಮಿತಿಯ ಸದಸ್ಯೆ, ನರಹರಿ ಅವರ ಪತ್ನಿ ಮೇದಾರ ದಾನಮ್ಮ (ಲತಾ) ಅವರೂ ಶರಣಾಗಿದ್ದಾರೆ. ಆರೋಗ್ಯ ಹದಗೆಡುತ್ತಿದ್ದ ಕಾರಣ ದಂಪತಿ ಪೊಲೀಸ್ ಇಲಾಖೆ ಮುಂದೆ ಶರಣಾಗುವ ನಿರ್ಧಾರ ಕೈಗೊಂಡಿದ್ದರು.
ದಂಪತಿಯ ಶರಣಾಗತಿಯ ಬಳಿಕ, ಸಿಪಿಐನಲ್ಲಿ ಹಿರಿಯ ನಾಯಕರಾದ ವರ್ತಾ ಶೇಖರ್ ಮತ್ತು ಮುಪ್ಪಾಲ ಲಕ್ಷ್ಮಣ ರಾವ್ ಮಾತ್ರ ಸಕ್ರಿಯರಾಗಿದ್ದಾರೆ. ಇವರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ.
'ತೆಲಂಗಾಣ ಸರ್ಕಾರದ ಪುನರ್ವಸತಿ ಯೋಜನೆ ಅಡಿಯಲ್ಲಿ ನರಹರಿ ಅವರಿಗೆ ₹25 ಲಕ್ಷ ಡಿ.ಡಿ (ಡಿಮ್ಯಾಂಡ್ ಡ್ರಾಫ್ಟ್) ಮತ್ತು ದಾನಮ್ಮ ಅವರಿಗೆ ₹20 ಲಕ್ಷ ಡಿ.ಡಿ ನೀಡಲಾಗಿದೆ. ಯೋಜನೆಯಡಿಯಲ್ಲಿ ಹೆಚ್ಚುವರಿ ಅನುಕೂಲಗಳನ್ನೂ ಪಡೆಯಲಿದ್ದಾರೆ' ಎಂದು ಡಿಜೆಪಿ ಆನಂದ್ ತಿಳಿಸಿದರು.

