ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್ಇ) ಪೋರ್ಟಲ್ನಲ್ಲಿ ಕಾಣಿಸಿಕೊಂಡ ದೋಷಗಳು ಹಾಗೂ ಶುಲ್ಕ ಪಾವತಿ ವ್ಯವಸ್ಥೆಯನ್ನು ಸುಧಾರಿಸುವ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಾರ್ವಜನಿಕ ವಲಯದ ನಾಲ್ಕು ಬ್ಯಾಂಕ್ಗಳ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದರು.
ಸಭೆಯಲ್ಲಿ ಎಸ್ಬಿಐ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಿಬಿಎಸ್ಇ ಫಲಿತಾಂಶದ ನಂತರ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ, ಸಚಿವರು ಸಭೆ ನಡೆಸಿದರು.
ಮರುಮೌಲ್ಯಮಾಪನ, ಉತ್ತರ ಪತ್ರಿಕೆಗಳ ನಕಲು ಪ್ರತಿ ಪಡೆಯುವುದು ಮತ್ತು ವಿದ್ಯಾರ್ಥಿ ಸ್ನೇಹಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸುಧಾರಿಸುವಂತೆ ಎಂದು ಸಚಿವರು ಸೂಚಿಸಿದರು.
'ಸಕಾಲದಲ್ಲಿ ವಹಿವಾಟುಗಳನ್ನು ಖಚಿತಪಡಿಸಿಕೊಳ್ಳಬೇಕು. ಪಾವತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು. ಹೆಚ್ಚುವರಿ ಅಥವಾ ಕಡಿಮೆ ಶುಲ್ಕ ಕಡಿತದ ಸಂದರ್ಭದಲ್ಲಿ ಸ್ವಯಂಚಾಲಿತ ಮರುಪಾವತಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಪ್ರಬಲವಾದ ಪಾವತಿ ನಿಯಮಾವಳಿ ರೂಪಿಸಲು ಸಿಬಿಎಸ್ಇಗೆ ಸಹಾಯ ಮಾಡಬೇಕು' ಎಂದು ಸಚಿವರು ಬ್ಯಾಂಕ್ಗಳಿಗೆ ನಿರ್ದೇಶನ ನೀಡಿದರು.
'ಸುಧಾರಿತ ತಾಂತ್ರಿಕ ಸುರಕ್ಷತಾ ಕ್ರಮಗಳು, ನೈಜ ಸಮಯದ ಮೇಲ್ವಿಚಾರಣೆ ಮತ್ತು ಕುಂದುಕೊರತೆ ನಿವಾರಣಾ ವ್ಯವಸ್ಥೆಗಳ ಮೂಲಕ ಪಾವತಿ ವ್ಯವಸ್ಥೆಯ ಮೂಲಸೌಕರ್ಯವನ್ನು ಬಲಪಡಿಸಲು ಸಿಬಿಎಸ್ಇ ಜತೆಗೆ ಬ್ಯಾಂಕ್ಗಳು ನಿಕಟವಾಗಿ ಕೆಲಸ ಮಾಡಬೇಕು' ಎಂದು ಸೂಚಿಸಿದರು.
'ಸಿಬಿಎಸ್ಇಗೆ ಅಗತ್ಯ ಸಹಕಾರ ನೀಡಲಾಗುವುದು. ಸುಧಾರಿತ ಮತ್ತು ತಾಂತ್ರಿಕ ನವೀಕರಣ ಕಾರ್ಯ ಕೈಗೊಳ್ಳಲಾಗುವುದು' ಎಂದು ನಾಲ್ಕು ಬ್ಯಾಂಕ್ಗಳ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ವಿ. ಕಾಮಕೋಟಿ'ಸಿಬಿಎಸ್ಇ ಪೋರ್ಟಲ್: ತಾಂತ್ರಿಕ ದೋಷದ ತನಿಖೆ'
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) ಪೋರ್ಟಲ್ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ದೋಷಗಳು ಪಾವತಿ ವೈಫಲ್ಯ ಮತ್ತು ಉತ್ತರ ಪತ್ರಿಕೆಗಳ ಅಪ್ಲೋಡ್ಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಐಐಟಿ ಮದ್ರಾಸ್ ಹಾಗೂ ಐಐಟಿ ಕಾನ್ಪುರದ ನಾಲ್ವರು ಸದಸ್ಯರ ತಂಡವು ಸೋಮವಾರ ಸಂಜೆ ಪರಿಶೀಲನಾ ಕಾರ್ಯ ಆರಂಭಿಸಿದೆ.
'ಎರಡು ದಿನಗಳವರೆಗೆ ಸಮಸ್ಯೆ ಇತ್ತು. ಇದಕ್ಕೆ ನಿಖರ ಕಾರಣವೇನು? ತಾಂತ್ರಿಕ ಸಮಸ್ಯೆಯೇ ಅಥವಾ ಸೈಬರ್ ದಾಳಿಯೇ ಎಂಬುದನ್ನು ಪತ್ತೆ ಮಾಡಬೇಕಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಲು ಇದು ಅಗತ್ಯವಿದೆ' ಎಂದು ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಮಂಗಳವಾರ ತಿಳಿಸಿದ್ದಾರೆ. 'ಸಿಬಿಎಸ್ಇ ಪೋರ್ಟಲ್ ಸದ್ಯ ಸ್ಥಿರವಾಗಿದೆ. ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ' ಎಂದು ಹೇಳಿದ್ದಾರೆ. 'ಸಿಬಿಎಸ್ಇ ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಂಎಸ್) ವ್ಯವಸ್ಥೆಯನ್ನು ಪರಿಚಯಿಸುತ್ತಿರುವುದರ ಉದ್ದೇಶವೇ ಪಾರದರ್ಶಕತೆಯನ್ನು ಹೆಚ್ಚಿಸುವುದಾಗಿದೆ. ಇದರಿಂದ ಮೌಲ್ಯಮಾಪನ ಮಾಡಿದ ತಮ್ಮ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳು ನೋಡಬಹುದು. ಎಲ್ಲಿ ಅಂಕಗಳನ್ನು ಕಡಿತಗೊಳಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು' ಎಂದು ತಿಳಿಸಿದ್ದಾರೆ.

