ತಿರುವನಂತಪುರ: 'ಹಿಂದಿನ ಎಲ್ಡಿಎಫ್ ಆಡಳಿತದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಿಲ್ವರ್ಲೈನ್ ಸೆಮಿ-ಹೈ ಸ್ಪೀಡ್ ರೈಲು ಯೋಜನೆಯನ್ನು ರದ್ದುಗೊಳಿಸಲಾಗಿದೆ' ಎಂದು ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಬುಧವಾರ ಘೋಷಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಸತೀಶನ್, 'ಸಿಲ್ವರ್ಲೈನ್ ಯೋಜನೆಗೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅಧಿಸೂಚನೆಗಳನ್ನು ರದ್ದುಗೊಳಿಸಲಾಗುವುದು' ಎಂದು ತಿಳಿಸಿದ್ದಾರೆ.
'ಇದಲ್ಲದೆ ಸಿಲ್ವರ್ಲೈನ್ ಯೋಜನೆ ವಿರೋಧಿಸುವವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ನ್ಯಾಯಾಯಲಕ್ಕೆ ಸರ್ಕಾರ ಮನವಿ ಮಾಡಲಿದೆ' ಎಂದು ಹೇಳಿದ್ದಾರೆ.
'ತಿರುವನಂತಪುರದಿಂದ ಕಾಸರಗೋಡಿಗೆ ಸೆಮಿ-ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಕೈಬಿಡಲು ನಿರ್ಧರಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ಕೇರಳ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ಜಂಟಿ ಉಪಕ್ರಮವಾದ ಕೆ-ರೈಲಿನ 530 ಕಿ.ಮೀ. ಉದ್ದದ ಈ ಯೋಜನೆಯು ಎರಡು ಜಿಲ್ಲೆಗಳ ನಡುವಣ ಪ್ರಯಾಣ ಅವಧಿಯನ್ನು ನಾಲ್ಕು ತಾಸುಗಳಷ್ಟು ಕಡಿಮೆ ಮಾಡಲಿದೆ ಎಂದು ಉದ್ದೇಶಿಸಲಾಗಿತ್ತು.
ಕೆ-ರೈಲ್ ಯೋಜನೆಯ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದ್ದವು. ಯೋಜನೆಯ ಭೂಸ್ವಾಧೀನಕ್ಕಾಗಿ ಹಲವು ಸ್ಥಳಗಳಲ್ಲಿ ಸ್ಥಾಪಿಸಲಾದ ಹಳದಿ ಕಲ್ಲಿನ ಗುರುತುಗಳನ್ನು ತೆಗೆದು ಹಾಕಲು ಕಂದಾಯ ಇಲಾಖೆಗೆ ಸೂಚಿಸಲಾಗಿದೆ ಎಂದು ಸತೀಶನ್ ತಿಳಿಸಿದ್ದಾರೆ.
ಇದೇ ವೇಳೆ ಆಗಸ್ಟ್ 31ಕ್ಕೆ ಮುಕ್ತಾಯಗೊಳ್ಳಬೇಕಿದ್ದ ಕೇರಳ ಲೋಕಸೇವಾ ಆಯೋಗದ (ಪಿಎಸ್ಸಿ) ರ್ಯಾಂಕ್ ಪಟ್ಟಿಯ ಅವಧಿಯನ್ನು ನವೆಂಬರ್ 30ರವರೆಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ನೇಮಕಾತಿ ನಡೆಯದಿದ್ದರಿಂದ ಪಿಎಸ್ಸಿ ರ್ಯಾಂಕ್ ಲಿಸ್ಟ್ ಮುಂದೂಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಯುಡಿಎಫ್ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
'ಮೆನನ್' ಸಮರ್ಥಿಸಿದ ಸತೀಶನ್
ಪ್ರಮಾಣವಚನ ಕಾರ್ಯಕ್ರಮದಲ್ಲಿ 'ಮೆನನ್' ಎಂಬ ಜಾತಿ ಉಪನಾಮ ಬಳಸಿದ ವಿವಾದದ ಕುರಿತು ಪ್ರತಿಕ್ರಿಯಿಸಿದ ಸತೀಶನ್, 'ನನ್ನ ತಂದೆಯನ್ನು ನೆನಪಿಸಿಕೊಂಡೆ, ಏನು ತಪ್ಪಾಗಿದೆ' ಎಂದು ಪ್ರಶ್ನಿಸಿದ್ದಾರೆ.

