ಕಾಸರಗೋಡು: 'ಯಕ್ಷಗಾನ ಕ್ಷೇತ್ರ ಎತ್ತ ಸಾಗುತ್ತಿದೆ' ಎಂಬ ವಿಚಾರಗಳ ಕುರಿತಾಗಿ ಸಮಗ್ರ ಚರ್ಚಾಗೋಷ್ಠಿ ಜೂ. 14ರಂದು ಬೆಳಗ್ಗೆ 10ಕ್ಕೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಜರುಗಲಿದೆ.
'ಯಕ್ಷಗಾನ ಕ್ಷೇತ್ರ ಎತ್ತ ಸಾಗುತ್ತಿದೆ-ಇಂದಿನ ಹತ್ತು ಹಲವು ವಿದ್ಯಮಾನಗಳ ನಡುವೆ ಸಂಸ್ಕೃತಿಯನ್ನು ಉಳಿಸಿಕೊಂಡು ಕಲೆಯು ಬೆಳೆಯುತ್ತಿದೆಯೇ!? ಪ್ರೇಕ್ಷಕ-ಕಲಾವಿದರ ಸಾಮರಸ್ಯ ಇಲ್ಲದಂತಾಗಿದೆಯೇ ! ಎಲ್ಲೋ ಒಂದಡೆ ರಂಗವು ಕೇವಲ ಪ್ರಚಾರವನ್ನು ಮಾತ್ರವೇ ಬಯಸುತ್ತಿದೆಯೇ? ಕಲೆಗೆ-ರಂಗಕ್ಕೆ ನ್ಯಾಯದೊರಕಿಸುವಲ್ಲಿ ನಮ್ಮಲ್ಲಿ ಇಂದು ಕೊರತೆ ಕಾಣುತ್ತಿದೆಯೇ...? ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಅಂದು ಬೆಳಗ್ಗೆ 9.45ಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಮಾರಂಭ ಉದ್ಘಾಟಿಸುವರು. ಯಕ್ಷಗಾನ ವಲಯದ ಹಿರಿಯ ವಿದ್ವಾಂಸರಾದ ಡಾ. ಎಂ ಪ್ರಭಾಕರ್ ಜೋಶಿ , ಡಾ. ರಾಘವ ನಂಬಿಯಾರ್ ಅವರು ಚಾಲನಾ ಉಪನ್ಯಾಸ ನೀಡಲಿರುವರು. ನಂತರ 50ಕ್ಕೂ ಹೆಚ್ಚು ವಿವಿಧ ವಲಯಗಳ ಗಣ್ಯರು ವಿದ್ವಾಂಸರು ಸೇರಿ ಇಡೀ ದಿನದ ಗೋಷ್ಠಿ ನಡೆಸಿಕೊಡುವುದರ ಜತೆಗೆ ದಾಖಲೀಕರಣ ನಡೆಯಲಿದೆ. ಸಂಜೆ 5ರಿಂದ ಕೀರ್ತಿ ಶೇಷ ಪಣಂಬೂರು ವೆಂಕಟರಾಯ ಐತಾಳ ಅವರ ನೆನಪಿನೊಂದಿಗೆ ಪಣಂಬೂರು ವೆಂಕಟರಾಯ ಐತಾಳ ಪ್ರತಿಷ್ಠಾನ ಉಡುಪಿ ಇವರಿಂದ 'ಗುರುದಕ್ಷಿಣೆ ಅಸಿಕಾ ಪರಿಣಯ' ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.



