ನವದೆಹಲಿ: ಅಂತ್ಯೋದಯ ಅನ್ನ ಯೋಜನೆಯಡಿ (ಎಎವೈ) ಪ್ರತಿ ಕುಟುಂಬಕ್ಕೆ, ಪ್ರತಿ ತಿಂಗಳಿಗೆ ನೀಡಲಾಗುತ್ತಿದ್ದ ಆಹಾರ ಧಾನ್ಯದ ಪ್ರಮಾಣವನ್ನು, ಒಂದು ಕುಟುಂಬಕ್ಕೆ 35 ಕೆ.ಜಿ ಬದಲು, ಪ್ರತಿ ವ್ಯಕ್ತಿಗೆ 7 ಕೆ.ಜಿಯಂತೆ ನಿಗದಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ- 2013ಕ್ಕೆ ತಿದ್ದುಪಡಿ ತರಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಸ್ತಾವ ಸಲ್ಲಿಸಿದ್ದು, ಆಹಾರ ಸಚಿವಾಲಯವು ಜುಲೈ 13ರವರೆಗೆ ಆಹಾರ ಭದ್ರತಾ (ತಿದ್ದುಪಡಿ) ಮಸೂದೆ- 2026ಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಿದೆ.
ಸದ್ಯ ಜಾರಿಯಲ್ಲಿರುವ ಕಾನೂನಿನಂತೆ ಎಎವೈ ಕುಟುಂಬಗಳಿಗೆ, ಕುಟುಂಬದ ಗಾತ್ರವನ್ನು (ಸದಸ್ಯರ ಸಂಖ್ಯೆ) ಪರಿಗಣಿಸದೆ ಪ್ರತಿ ತಿಂಗಳು 35 ಕೆ.ಜಿಯಷ್ಟು ಆಹಾರ ಧಾನ್ಯ ವಿತರಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಆದ್ಯತೆಯ ಕುಟುಂಬಗಳ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆ.ಜಿ ಆಹಾರ ಧಾನ್ಯ ಲಭಿಸುತ್ತಿದೆ.
ಪ್ರಸ್ತಾವಿತ ಯೋಜನೆಯಡಿ, ಇಬ್ಬರು ಸದಸ್ಯರಿರುವ ಎಎವೈ ಕುಟುಂಬಕ್ಕೆ ತಲಾ 7 ಕೆ.ಜಿಯಂತೆ ತಿಂಗಳಿಗೆ ಒಟ್ಟು 14 ಕೆ.ಜಿ ಆಹಾರ ಧಾನ್ಯ ಲಭಿಸಲಿದೆ. ಇದೇ ವೇಳೆ, ಕುಟುಂಬದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರಿದ್ದರೆ ಅವರು ಸದ್ಯ ಅಸ್ತಿತ್ವದಲ್ಲಿರುವ 35 ಕೆ.ಜಿ ಆಹಾರ ಧಾನ್ಯ ಪಡೆಯಲು ಅರ್ಹರಾಗಿರುತ್ತಾರೆ. ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯ ಹಂಚಿಕೆ ಆಗುವುದರಿಂದ ಇನ್ನಷ್ಟು ಬಡ ಕುಟುಂಬಗಳಿಗೆ ಅನುಕೂಲ ಆಗಲಿದೆ ಎಂದು ಸರ್ಕಾರ ಅಂದಾಜಿಸಿದೆ.

