ಜಮ್ಮು : ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಅತಿಕ್ರಮ ಪ್ರವೇಶ ಮಾಡಿರುವ ನುಸುಳುಕೋರನನ್ನು ಸೇನಾ ಪಡೆಗಳು ಬಂಧಿಸಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಮೊಹಮ್ಮದ್ ಸಜದ್ (26) ಬಂಧಿತ.
ಕೃಷ್ಣ ಘಾಟಿ ವಲಯದ ಗುಲ್ಪೂರ್ ಪ್ರದೇಶದ ಗಡಿಯಿಂದ ಶುಕ್ರವಾರ ಭಾರತದೊಳಗೆ ಪ್ರವೇಶಿಸಿದ್ದ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಬಂಧಿತ ಪಿಒಕೆಯ ಅಬ್ಬಾಪುರದ ಪೊಲಾಸ್ ಗ್ರಾಮದ ನಿವಾಸಿ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದ್ದು, ತಾನು ಆಕಸ್ಮಿಕವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿದೆ ಎಂದು ಆತ ತಿಳಿಸಿದ್ದಾನೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ಭದ್ರತಾ ಸಂಸ್ಥೆಯು ಅವರ ಹೇಳಿಕೆಯನ್ನು ಪರಿಶೀಲಿಸುತ್ತಿದ್ದು, ಗಡಿ ಪ್ರವೇಶದ ಸುತ್ತಲಿನ ಸಂದರ್ಭಗಳನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

