ಪ್ಯಾರಿಸ್: ಭಾರತದಲ್ಲಿ ಬಡತನ ಮತ್ತು ಅಸಮಾನತೆ ಕುರಿತ ಅಧ್ಯಯನಕ್ಕಾಗಿ ಅರ್ಥಶಾಸ್ತ್ರಜ್ಞ ಜೀನ್ ಡ್ರೇಝ್ ಅವರಿಗೆ ಜಾಗತಿಕ ಅಸಮಾನತೆ ಸಂಶೋಧನಾ ಪ್ರಶಸ್ತಿ(Global Inequality Research Award) ಲಭಿಸಿದೆ.
ಪ್ಯಾರಿಸ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಶುಕ್ರವಾರ ನಡೆದ ವಿಶ್ವ ಅಸಮಾನತೆ ಸಮ್ಮೇಳನದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭಾರತದಲ್ಲಿ ಬಡತನ ಮತ್ತು ಅಸಮಾನತೆ ಕುರಿತ ಅವರ ಸಂಶೋಧನೆ, ಜೊತೆಗೆ MNREGA ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಕುರಿತು ಅವರು ನಡೆಸಿದ ಕಾರ್ಯವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಡ್ರೇಝ್, 'ಈ ಗೌರವ ನನ್ನೊಬ್ಬನ ಸಾಧನೆಯಲ್ಲ. ನಾನು ಮಾಡಿದ ಎಲ್ಲ ಕೆಲಸಗಳ ಹಿಂದೆ ಅನೇಕ ಜನರ ಸಹಕಾರ ಮತ್ತು ಸಾಮೂಹಿಕ ಪ್ರಯತ್ನವಿದೆ' ಎಂದು ಹೇಳಿದರು.
'ಭಾರತದಲ್ಲಿ ಆರ್ಥಿಕ ಅಸಮಾನತೆಯಷ್ಟೇ ಅಲ್ಲ, ಜಾತಿ, ಲಿಂಗ ಹಾಗೂ ಶಿಕ್ಷಣದ ಅವಕಾಶಗಳಲ್ಲಿಯೂ ದೊಡ್ಡ ಪ್ರಮಾಣದ ಅಸಮಾನತೆಗಳಿವೆ. ಆದರೆ ಇವುಗಳ ವಿರುದ್ಧ ಹೋರಾಟ ನಡೆಸಿದ ಸಮೃದ್ಧ ಇತಿಹಾಸವೂ ಭಾರತಕ್ಕಿದೆ. ಅಂತಹ ಕೆಲವು ಚಳವಳಿಗಳೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ದೊರೆತಿರುವುದು ಭಾಗ್ಯ' ಎಂದರು.
ಜಾಗತಿಕ ಅಸಮಾನತೆಗಳ ಕುರಿತು ಅರಿವು ಹೆಚ್ಚಿಸಲು ಮತ್ತು ಸಂಶೋಧನೆಗೆ ಮಹತ್ವದ ಕೊಡುಗೆ ನೀಡಿದ ಸಂಶೋಧಕರಿಗೆ ಈ ಪ್ರಶಸ್ತಿಯನ್ನು ಎರಡು ವರ್ಷಗಳಿಗೊಮ್ಮೆ ನೀಡಲಾಗುತ್ತದೆ. ಇದು ಪ್ರಶಸ್ತಿಯ ಎರಡನೇ ಆವೃತ್ತಿಯಾಗಿದೆ.
2024ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಸಾಮಾಜಿಕ ಮತ್ತು ಪರಿಸರ ಅಸಮಾನತೆಗಳ ಕುರಿತ ಸಂಶೋಧನೆಗಾಗಿ ಬಿನಾ ಅಗರ್ವಾಲ್ ಹಾಗೂ ಜೇಮ್ಸ್ ಕೆ. ಬಾಯ್ಸ್ ಅವರಿಗೆ ಜಂಟಿಯಾಗಿ ಈ ಪ್ರಶಸ್ತಿ ನೀಡಲಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಡ್ರೇಝ್ ಅವರು MGNREGA ಯೋಜನೆಯನ್ನು ದುರ್ಬಲಗೊಳಿಸುವ ಕ್ರಮಗಳನ್ನು ವಿರೋಧಿಸಿದ್ದರು. ಆಹಾರ ಪಡಿತರ ಪಡೆಯಲು ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿರುವ ಕ್ರಮವನ್ನೂ ಪ್ರಶ್ನಿಸಿದ್ದರು.
ಆಧಾರ್ ದೃಢೀಕರಣ ಇಲ್ಲ ಎಂಬ ಕಾರಣಕ್ಕೆ ಅರ್ಹ ಫಲಾನುಭವಿಗಳಿಗೆ ಆಹಾರ ಪಡಿತರ ನಿರಾಕರಿಸಲಾಗುತ್ತಿರುವ ಬಗ್ಗೆ ಡ್ರೇಝ್ ಆಕ್ಷೇಪ ವ್ಯಕ್ತಪಡಿಸಿದ್ದರು.

