ಕಾಸರಗೋಡು: ಉತ್ತರ ಕೇರಳದ ಶೈಕ್ಷಣಿಕ ಕ್ಷೇತ್ರವೆನಿಸಿರುವ ಕುಣಿಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ 'ಕುಣಿಯಾ ಎಜು ಕಾನ್ಕ್ಲೇವ್ 2026' ಕುನಿಯದ ಕ್ಯಾಂಪಸ್ನಲ್ಲಿ ಜರುಗಿತು. ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಜಿ ಕಾರ್ಯದರ್ಶಿ ಅನಿಲ್ ಸ್ವರೂಪ್ ಐಎಎಸ್ ಅವರು, 'ಡಿಗ್ರಿ ವಿದ್ ಐಎಎಸ್' ಶೈಕ್ಷಣಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಯುಪಿಎಸ್ಸಿ ಸಿವಿಲ್ ಸರ್ವೀಸಸ್, ನೀಟ್ ಮತ್ತು ಜೆಇಇ ಸೇರಿದಂತೆ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪದವಿಪೂರ್ವ ಅಧ್ಯಯನದ ಜೊತೆಗೆ ಒಂದೇ ಕ್ಯಾಂಪಸ್ನಲ್ಲಿ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡುವ ಗುರಿಯೊಂದಿಗೆ ಕುನಿಯಾ ಸಂಸ್ಥೆಯ ದೃಷ್ಟಿಕೋನವು ಶೈಕ್ಷಣಿಕ ಶ್ರೇಷ್ಠತೆಯ ಜೊತೆಗೆ ನಾಯಕತ್ವದ ಗುಣ ಮತ್ತು ಸಾಮಾಜಿಕ ಬದ್ಧತೆಯನ್ನು ಬೆಳೆಸುವ ಪರಿವರ್ತಕ ಶೈಕ್ಷಣಿಕ ಮಾದರಿಯಾಗಿದೆ ಎಂದು ತಿಳಿಸಿದರು.
ಸಮಾವೇಶದ ಅಂಗವಾಗಿ ಶಿಕ್ಷಣ, ನಾಯಕತ್ವ, ಸಾರ್ವಜನಿಕ ಸೇವೆ, ವ್ಯಕ್ತಿತ್ವ ವಿಕಸನ ಮತ್ತು ಶಿಕ್ಷಣದಲ್ಲಿನ ನವೀನ ಸಾಧ್ಯತೆಗಳಂತಹ ವಿಷಯಗಳ ಕುರಿತು ರಾಷ್ಟ್ರಮಟ್ಟದ ಚರ್ಚೆಗಳು, ಮುಖ್ಯ ಭಾಷಣಗಳು ಮತ್ತು ಸಂವಾದಗಳು ನಡೆಯಿತು. ಶೈಕ್ಷಣಿಕ ಸುಧಾರಣೆ, ಸಾರ್ವಜನಿಕ ನೀತಿ ನಿರೂಪಣೆಗೆ ನೀಡಿರುವ ಕೊಡುಗೆಗಳ ಕುರಿತು ಅನಿಲ್ ಸ್ವರೂಪ್ ಮಾಹಿತಿ ನೀಡಿದರು.
ಕುನಿಯಾ ಐಎಎಸ್ ಅಕಾಡೆಮಿಯ ನಿರ್ದೇಶಕ ಡಾ. ಸಾಜಿದ್ ಅಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞರು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶೈಕ್ಷಣಿಕ ಮುಖಂಡರು ಮತ್ತು ನಾಗರಿಕ ಸೇವಾ ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಕುನಿಯಾ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಡಾ. ಲಕ್ಷ್ಮೀಬಾಯಿ ಪಿ.ಎಸ್. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿ. ಸಂತೋಷ್ ವಂದಿಸಿದರು.



