ತೂತ್ತುಕುಡಿ : ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಡಿಎಂಕೆಯ ವಿಳಾತ್ತಿಕುಳಮ್ ಶಾಸಕ ಜಿ.ವಿ.ಮಾರ್ಕಂಡೇಯನ್ ಅವರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಕ್ರಮವನ್ನು ಖಂಡಿಸಿ ಬೆಂಬಲಿಗರು ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿರುವ ನಡುವೆ, ಶಾಸಕರ ನಿವಾಸದಿಂದ ಪೊಲೀಸರ ತಂಡವೊಂದು ಅವರನ್ನು ವಶಕ್ಕೆ ತೆಗೆದುಕೊಂಡಿದೆ.
ನಂತರ ಅವರನ್ನು ಬಂಧಿಸಲಾಗಿದೆ.
ಮುಖ್ಯಮಂತ್ರಿಯನ್ನು ಬೆದರಿಸಿ ಭಾಷಣ ಮಾಡಿದ ಬಗ್ಗೆ ಟಿವಿಕೆ ಪದಾಧಿಕಾರಿ ಪಿ.ಕಾಸಿರಾಮ್ ಅವರು ದೂರು ನೀಡಿದ ನಂತರ ಶಾಸಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 18ರಂದು ಜಿಲ್ಲೆಯ ಕೋವಿಲ್ಪಟ್ಟಿಯಲ್ಲಿ ನಡೆದ ಸಭೆಯಲ್ಲಿ ಮಾರ್ಕಂಡೇಯನ್ ಅವರು ಮುಖ್ಯಮಂತ್ರಿಯನ್ನು ಬೆದರಿಸಿದ್ದು ಮತ್ತು ಅವರ ವಿರುದ್ಧ ಕೀಳು ಅಭಿರುಚಿಯ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಾಸಿರಾಮ್ ದೂರಿನಲ್ಲಿ ತಿಳಿಸಿದ್ದಾರೆ.
ತೂತ್ತುಕುಡಿ ಜಿಲ್ಲೆಯಲ್ಲಿ ಈ ತಿಂಗಳಲ್ಲಿ ಬಂಧನಕ್ಕೊಳಗಾದ ಎರಡನೇ ಶಾಸಕ ಮಾರ್ಕಂಡೇಯನ್ ಅವರಾಗಿದ್ದಾರೆ. ಅದಕ್ಕೂ ಹಿಂದೆ, ವಿಜಯ್ ಅವರ ವಿರುದ್ಧ ಮಾನಹಾನಿ ಭಾಷಣ ಮಾಡಿದ್ದಕ್ಕಾಗಿ ಜುಲೈ 3ರಂದು ಜಿಲ್ಲೆಯ ತಿರುಚೆಂಡೂರ್ ಕ್ಷೇತ್ರದ ಶಾಸಕ ಅನಿತಾ ಆರ್. ರಾಧಾಕೃಷ್ಣನ್ ಅವರು ಬಂಧಿಸಲಾಗಿತ್ತು.

