ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಡಳಿತ ವಿರೋಧಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನ ಭದ್ರತಾ ಪಡೆಗಳು ನಡೆಸುತ್ತಿರುವ ರಕ್ತಪಾತ ಮತ್ತು ಮಾರಣಹೋಮವನ್ನು ಸಮರ್ಥಿಸಿಕೊಳ್ಳುವ ಮೂಲಕ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಪಿಒಕೆಯಲ್ಲಿ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಾರ್ವಜನಿಕರನ್ನು 'ಭಾರತದಂತೆಯೇ ಶತ್ರುಗಳು' ಎಂದು ಕರೆದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ರಾವಲಕೋಟ್ ಮತ್ತು ಮಿರ್ಪುರ್ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 32 ಕಾಶ್ಮೀರಿ ಪ್ರತಿಭಟನಾಕಾರರು ಹತ್ಯೆಗೀಡಾಗಿದ್ದಾರೆ.
'ನಾನು ಸ್ವತಂತ್ರ ಕಾಶ್ಮೀರದ ಪ್ರತಿಭಟನಾಕಾರರನ್ನು ಭಾರತವನ್ನು ನೋಡುವ ರೀತಿಯಲ್ಲೇ ನೋಡುತ್ತೇನೆ. ಶತ್ರುಗಳೆಂದೇ ಪರಿಗಣಿಸುತ್ತೇನೆ' ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಪಿಒಕೆಯಲ್ಲಿ ಭುಗಿಲೆದ್ದ ಹಿಂಸಾಚಾರ
ಜೂನ್ 5 ರಿಂದ ಪಿಒಕೆಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಉದ್ವಿಗ್ನತೆಗೆ ಇದುವರೆಗೆ 90ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ.
ಮಿರ್ಪುರ್ ನಗರದಲ್ಲಿ ಪಾಕಿಸ್ತಾನಿ ರಕ್ಷಣಾ ಸಿಬ್ಬಂದಿ ನಿಶಸ್ತ್ರ ಸಾರ್ವಜನಿಕರ ಮೇಲೆ ಬಹಿರಂಗವಾಗಿ ಗುಂಡು ಹಾರಿಸಿ, ಬಳಿಕ ಶವಗಳನ್ನು ಸೇನಾ ವಾಹನಗಳಿಗೆ ತುಂಬಿಸಿಕೊಳ್ಳುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿವೆ.
ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರಶ್ನಿಸಿದ್ದಕ್ಕೆ ಪಾಕಿಸ್ತಾನ ಸರ್ಕಾರದಿಂದ ನಿಷೇಧಕ್ಕೊಳಗಾಗಿರುವ ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ಸಂಸ್ಥೆಯ ಕಾರ್ಯಕರ್ತರನ್ನೇ ಪ್ರಮುಖವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಮೃತರಲ್ಲಿ ಜೆಎಎಸಿ ಸಂಸ್ಥಾಪಕ ಉಮರ್ ನಜೀರ್ ಅವರ ಕಿರಿಯ ಸಹೋದರ ಉಸ್ಮಾನ್ ನಜೀರ್ ಕೂಡ ಸೇರಿದ್ದಾರೆ.
ದ್ವೇಷದ ಬೀಜ ಬಿತ್ತುತ್ತಿದ್ದೀರಿ: ಜೆಎಎಸಿ ಆಕ್ರೋಶ
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೆಎಎಸಿ, 'ರಾವಲಕೋಟ್ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಭದ್ರತಾ ಪಡೆಗಳು ಸಾರ್ವಜನಿಕರ ಮೇಲೆ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸುತ್ತಿವೆ. ನಾವು ಶವಗಳನ್ನು ಎತ್ತುತ್ತಿದ್ದೇವೆ. ಆದರೆ, ಇಂದು ನೀವು ಬಿತ್ತುತ್ತಿರುವ ಈ ದ್ವೇಷದ ಬೆಂಕಿಯನ್ನು ನಂದಿಸಲು ನಿಮ್ಮಿಂದ ಸಾಧ್ಯವಿಲ್ಲ' ಎಂದು ಬರೆದುಕೊಂಡಿದೆ.
ಇದೇ ವೇಳೆ, ಪ್ರತಿಭಟನಾಕಾರರು ರಾವಲಕೋಟ್ಗೆ ಬಲವಂತವಾಗಿ ನುಗ್ಗಲು ಯತ್ನಿಸುತ್ತಿದ್ದಾರೆ ಎಂಬ ಪಾಕಿಸ್ತಾನಿ ಮಾಧ್ಯಮಗಳ ವರದಿಯನ್ನು ಜೆಎಎಸಿ ಖಂಡಿಸಿದೆ. 'ರಾವಲಕೋಟ್ ನಮ್ಮದೇ ನಗರ. ಅದನ್ನು ನೀವು ಅಕ್ರಮವಾಗಿ ಮತ್ತು ಬಲವಂತವಾಗಿ ವಶಪಡಿಸಿಕೊಂಡಿದ್ದೀರಿ. ನಾವು ಯಾರ ಮನೆಗೂ ನುಗ್ಗಿಲ್ಲ, ನಮ್ಮ ಸ್ವಂತ ನೆಲದಲ್ಲೇ ನಮ್ಮ ಜನರ ಮಾರಣಹೋಮ ಮಾಡುತ್ತಿದ್ದೀರಿ' ಎಂದು ಸಂಘಟನೆ ಪ್ರತ್ಯುತ್ತರ ನೀಡಿದೆ.

