ಚೆನ್ನೈ: ಪಿಎಂಕೆ ಸಂಸ್ಥಾಪಕ ಎಸ್. ರಾಮದಾಸ್ ಅವರು ತಾವು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವುದಾಗಿ ಶನಿವಾರ ಘೋಷಿಸಿದರು. ಪುತ್ರ ಅನ್ಬುಮಣಿ ಅವರಿಗೆ ಪಕ್ಷದ ನಾಯಕತ್ವವನ್ನು ಹಸ್ತಾಂತರಿಸಿದ ಬಳಿಕ ಅವರು ಈ ನಿರ್ಧಾರವನ್ನು ತಿಳಿಸಿದರು.
ತಿಂದಿವಾನಂ ಬಳಿಯ ಖಾಸಗಿ ಕಾಲೇಜೊಂದರಲ್ಲಿ ರಾಮದಾಸ್ ಅವರ 88ನೇ ಹುಟ್ಟುಹಬ್ಬದ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಅವರು 'ಇನ್ನುಮುಂದೆ ಅನ್ಬುಮಣಿ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ನಾನೂ ಅವರಿಗೆ ಬೆಂಬಲ ನೀಡುತ್ತೇನೆ' ಎಂದರು.
'ರಾಜಕಾರಣದಿಂದ ನಾನು ನಿವೃತ್ತನಾಗುತ್ತೇನೆ. ಇಂದಿನಿಂದ ರಾಜಕೀಯಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಯಾವುದೇ ರಾಜಕೀಯ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವುದಿಲ್ಲ' ಎಂದು ಹೇಳಿದರು.
'ಅನ್ಬುಮಣಿಯನ್ನು ಎಲ್ಲರೂ ಬೆಂಬಲಿಸಬೇಕು. ನನ್ನನ್ನು ನೋಡಲು ನೀವು ಬರಬಹುದು. ನನ್ನ ಆರೋಗ್ಯವನ್ನು ವಿಚಾರಿಸಬಹುದು. ಆದರೆ ನಾನು ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ, ನೀವೂ ಮಾತನಾಡಬೇಡಿ' ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ 18 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪಿಎಂಕೆ, 4 ಸ್ಥಾನಗಳಲ್ಲಿ ಗೆಲುವು ಸಾಧಿಸಿತು.

