ಕುಂಬಳೆ: ಇಲ್ಲಿನ ಕೊಯಿಪ್ಪಾಡಿಯಲ್ಲಿ ಸಮುದ್ರಕ್ಕೆ ನಿರ್ಮಿಸಲಾದ ತಡೆಗೋಡೆ ಸಮುದ್ರಪಾಲಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಸಮುದ್ರ ತಡೆಗೋಡೆ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಸಮುದ್ರಪಾಲಾಗಿದೆ ಎಂದು ನಾಗರಿಕರು ತಿಳಿಸುತ್ತಿದ್ದಾರೆ. ಕಡಲ್ಕೊರೆತ ತಡೆಯಲೆಂದು ತಂದು ಹಾಕಲಾದ ಕಗ್ಗಲ್ಲುಗಳೆಲ್ಲ ಸಮುದ್ರಪಾಲಾಗುವು ದರೊಂದಿಗೆ ಇಲ್ಲಿನ ಜನರಲ್ಲಿ ಆತಂಕ ಇನ್ನಷ್ಟು ತೀವ್ರಗೊಂಡಿದೆ.
ಸಮುದ್ರ ಬದಿಯಲ್ಲಿರುವ ತೆಂಗಿನ ಮರಗಳು ಯಾವುದೇ ಕ್ಷಣದಲ್ಲಿ ಕುಸಿದುಬೀಳುವ ಸಾಧ್ಯತೆಯಿದೆ. ಕೊಯಿಪ್ಪಾಡಿಯಿಂದ ಪೆರ್ವಾಡ್ ಕಡಪ್ಪುರವರೆಗೆ ಕಡಲ್ಕೊರೆತ ತೀವ್ರಗೊಂಡಿದೆ. ಕೊಯಿಪ್ಪಾಡಿ ಹಾಗೂ ಪರಿಸರ ಪ್ರದೇಶಗಳಲ್ಲಿ ನೂರರಷ್ಟು ಕುಟುಂಬಗಳು ವಾಸಿಸುತ್ತಿವೆ. ಈ ಹಿಂದೆಯೂ ಇಲ್ಲಿ ಉಂಟಾದ ಕಡಲ್ಕೊರೆತದಿಂದ ಮನೆಗಳು ಹಾನಿಗೀಡಾಗಿದ್ದವು. ಕಡಲ್ಕೊರೆತ ಇನ್ನಷ್ಟು ತೀವ್ರಗೊಂಡಲ್ಲಿ ಭಾರೀ ಹಾನಿ ಸಂಭವಿಸಬಹುದೆಂಬ ಆತಂಕ ಇಲ್ಲಿನ ನಾಗರಿಕರದ್ದಾಗಿದೆ.

.jpg)
.jpg)
