ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಂತೆ ಅಕ್ರಮದ ಹಲವು ಸಂಗತಿಗಳು ಹೊರಬರುತ್ತಿವೆ. ಪ್ರಕರಣದ ಆರೋಪಿ ಲವಕುಶ್ ಮಿಶ್ರಾ ಅವರ ಪತ್ನಿ ಅಕ್ರಮವಾಗಿ ತಮ್ಮ ಹೆಸರಿನಲ್ಲಿ ಕಟ್ಟವೊಂದನ್ನು ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು(ಎಡಿಎ) ಅವರಿಗೆ ನೋಟಿಸ್ ನೀಡಿದೆ.
ಸೋಹಾವಾಲ್ ತಹಸೀಲ್ನ ಬನ್ವೀರ್ಪುರ ಹಳ್ಳಿಯಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಲವಕುಶ್ ಪತ್ನಿ ಸುಪ್ರಿಯಾ ಮಿಶ್ರಾ ಅವರ ಹೆಸರಿನಲ್ಲಿ ನಿವೇಶನ ಖರೀದಿಸಲಾಗಿದ್ದು, ಅಗತ್ಯ ಕಡ್ಡಾಯ ಅನುಮತಿಯನ್ನು ಪಡೆದಿಲ್ಲ ಎಂದು ಎಡಿಎ ತಿಳಿಸಿದೆ.
ಲವಕುಶ್ ಅವರ ಮನೆಗೂ ತೆರಳಿದ್ದ ಪೊಲೀಸರು, ಅವರ ಕುಟುಂಬ ಸದಸ್ಯರ ವಿಚಾರಣೆಯನ್ನೂ ನಡೆಸಿದ್ದಾರೆ.
ಈ ನಡುವೆ ಅಕ್ರಮದಲ್ಲಿ ಅವಿನಾಶ್ ಶುಕ್ಲಾ ಅವರ ಪಾತ್ರ ದೊಡ್ಡದಿದ್ದು, ಅವರ ಬಳಿಯೇ ಈವರೆಗೆ ಅತ್ಯಧಿಕ ಪ್ರಮಾಣದ ಹಣ ವಶಪಡಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧದ ಕಾನೂನು ಪ್ರಕ್ರಿಯೆಯಯನ್ನು ಪೊಲೀಸರು ತೀವ್ರ ಗೊಳಿಸುವ ಸಾಧ್ಯತೆ ಇದೆ.
ತನಿಖೆ ಸಂದರ್ಭದಲ್ಲಿ ಅವಿನಾಶ್ ಶುಕ್ಲಾ ಬಳಿ ₹20.39 ಲಕ್ಷ, ಕರುಣೇಶ್ ಪಾಂಡೆ ಬಳಿ ₹18.07 ಲಕ್ಷ, ಅನುಕಲ್ಪ ಮಿಶ್ರಾ ಬಳಿ ₹16.82 ಲಕ್ಷ, ಲವಕುಶ್ ಮಿಶ್ರಾ ಬಳಿ ₹14.25 ಲಕ್ಷ ಮತ್ತು ರಾಮಶಂಖರ್ ಮಿಶ್ರಾ ಬಳಿ ₹7.32 ಲಕ್ಷ, ರಾಮಶಂಕರ್ ಯಾದವ್ ಬಳಿ ₹1 ಲಕ್ಷ ವಶಪಡಿಸಿಕೊಳ್ಳಲಾಗಿದೆ.
ಅಲ್ಲದೇ, 11 ಗ್ರಾಂ ಚಿನ್ನ, 375 ಗ್ರಾಂ ಬೆಳ್ಳಿ ಮತ್ತು 1,121 ಅಮೆರಿಕ ಡಾಲರ್ ಅನ್ನೂ ಪೊಲಿಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ದಾಳಿ ವೇಳೆ ಕಂಡುಬಂದ ಕುತೂಹಲಕಾರಿ ವಿಷಯವೆಂದರೆ, ಅಯೋಧ್ಯೆ ರಾಮ ಮಂದಿರದಲ್ಲಿ ಹುಂಡಿ ಮೇಲಿನ ಕ್ಯೂ ಆರ್ ಕೋಡ್. ದೇಗುಲದಿಂದ ಪೊಲೀಸರು ಒಂದು ಕಾಣಿಕೆ ಹುಂಡಿಯನ್ನು ವಶಪಡಿಸಿಕೊಂಡಿದ್ದರು. ಅದರ ಮೇಲೆ ರಾಮ ರಾಜ್ಯ ಕೋಶ ಎಂದು ಬರೆಯಲಾಗಿತ್ತು. ಅದಕ್ಕೆ ಅಯೋಧ್ಯೆ ಯೋಗ ಕೇಂದ್ರದ ಕ್ಯೂಆರ್ ಕೋಡ್ ಅಂಟಿಸಲಾಗಿತ್ತು. ಈ ಯೋಗಕೇಂದ್ರದಲ್ಲಿ ಅವಿನಾಶ್ ಶುಕ್ಲಾ ದಶಕಕ್ಕೂ ಹೆಚ್ಚು ಸಮಯದಿಂದ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣ ಜೂನ್ 7ರಂದು ಬೆಳಕಿಗೆ ಬಂದಿದ್ದು, ತನಿಖೆಗ ಸರ್ಕಾರ ಎಸ್ಐಟಿ ರಚಿಸಿದೆ. ಪ್ರಕರಣ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

