ನವದೆಹಲಿ: 'ಸಂಸತ್ ಚಲೊ' ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಯುವ ನಾಯಕರಿಗೆ ಸಂಸದರನ್ನು ಭೇಟಿಯಾಗಲು ಅವಕಾಶ ನೀಡುವವರೆಗೂ ಉಪವಾಸ ಮುಂದುವರಿಸುವುದಾಗಿ ಪರಿಸರ ಕಾರ್ಯಕರ್ತ, ಶಿಕ್ಷಣತಜ್ಞ ಸೊನಮ್ ವಾಂಗ್ಚೂಕ್ ಹೇಳಿದ್ದಾರೆ.
ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಸೋಮವಾರ ಆಯೋಜಿಸಿದ್ದ 'ಸಂಸತ್ ಚಲೊ' ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಅನ್ನು ವಾಂಗ್ಚೂಕ್ ಖಂಡಿಸಿದ್ದಾರೆ.
ದೇಶದಲ್ಲಿ ವರದಿಯಾಗಿರುವ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ, ಜೂನ್ 20ರಿಂದ ಪ್ರತಿಭಟನೆ ನಡೆಸುತ್ತಿದೆ.
ಸಿಜೆಪಿಗೆ ಬೆಂಬಲ ಸೂಚಿಸಿ ಜೂನ್ 28ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್ಚೂಕ್ ಅವರನ್ನು ದೆಹಲಿ ಪೊಲೀಸರು ಜುಲೈ 18ರಂದು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನು ಸಿಜೆಪಿ ಕಾರ್ಯಕರ್ತರು ಖಂಡಿಸಿದ್ದಾರೆ. ವಾಂಗ್ಚೂಕ್ ಅವರನ್ನು 'ಅಕ್ರಮ ಬಂಧನದಲ್ಲಿ' ಇರಿಸಲಾಗಿದೆ ಎಂದು ದೂರಿದ್ದಾರೆ. ಆದರೆ ಈ ಆರೋಪಗಳನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ.
ಪ್ರತಿಭಟನೆ, ಸಂಸತ್ ಚಲೊ ವಿಚಾರವಾಗಿ ಸೊನಮ್ ಅವರು ಇಂದು ಮೂರು ಪತ್ರಗಳನ್ನು ಬರೆದಿದ್ದಾರೆ. ಮೊದಲ ಪತ್ರದಲ್ಲಿ, ನಿರಶನ ಅಂತ್ಯಗೊಳಿಸುವ ಸಂಬಂಧ ಮೂರು ಷರತ್ತುಗಳನ್ನು ಸರ್ಕಾರದ ಮುಂದಿಟ್ಟಿದ್ದರು. ನಂತರ ಬರೆದ ಮತ್ತೊಂದು ಪತ್ರದಲ್ಲಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೋರಿದ್ದರು.
ಇದೀಗ ಮೂರನೇ ಪತ್ರದಲ್ಲಿ, 'ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಯುವಕರ ಮೇಲೆ ನಡೆಸಿದ ಕ್ರೌರ್ಯವನ್ನು ನೋಡಿದ ನಂತರ, ಯುವ ನಾಯಕರಿಗೆ ಸಂಸತ್ ಭವನದಲ್ಲಿ ಸಂಸದರನ್ನು ಭೇಟಿಯಾಗಲು ಅವಕಾಶ ನೀಡುವವರೆಗೂ ಅಥವಾ ಅವರನ್ನು (ಸಂಸದರನ್ನು) ಆಸ್ಪತ್ರೆಯಲ್ಲಿ ಭೇಟಿಯಾಗಲು ನನಗೆ ಅವಕಾಶ ನೀಡುವವರೆಗೂ ಉಪವಾಸ ಮುಂದುವರಿಸಲು ನಿರ್ಧರಿಸಿದ್ದೇನೆ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸೊನಮ್ ವಾಂಗ್ಚೂಕ್ ಹೋರಾಟ; ಕೇಂದ್ರ ಸರ್ಕಾರದ ಕ್ರಮಕ್ಕೆ ಖಂಡನೆಪಾಕ್ ಜತೆ ಮಾತುಕತೆಗೂ ಸಿದ್ಧ, ವಾಂಗ್ಚೂಕ್ ಜತೆ ಮಾತನಾಡರು: ಮೋದಿ ವಿರುದ್ಧ ಠಾಕ್ರೆ
'ಅದಕ್ಕೂ ಮೊದಲು, ಸರ್ಕಾರವು ಶಿಕ್ಷಣ ಸಚಿವರನ್ನು ಹೊಣೆಯಾಗಿಸುತ್ತದೆ ಎಂದು ಭಾವಿಸಿದ್ದೇನೆ' ಎಂದಿದ್ದಾರೆ.
ಮುಂದುವರಿದು, 'ಪ್ರಚೋದನೆ' ನೀಡಿದರೂ, ಪ್ರತಿಭಟನಾಕಾರರು 'ಶಾಂತಿ'ಯಿಂದ ವರ್ತಿಸಿದ್ದು ತಮ್ಮನ್ನು ಆಳವಾಗಿ ಪ್ರಭಾವಿಸಿದೆ. ಮನಸ್ಸು ಕರಗುವಂತೆ ಮಾಡಿದೆ ಎಂದೂ ಹೇಳಿದ್ದಾರೆ.
'ವಿದ್ಯಾರ್ಥಿಗಳಿಗೆ ತಮ್ಮ ಅಹವಾಲುಗಳನ್ನು ಸಂಸತ್ತಿನ ಎದುರು ಮಂಡಿಸಲು ಇಂದು ಅಥವಾ ನಾಳೆ ಅವಕಾಶ ಕಲ್ಪಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸುವಂತೆ ಸರ್ಕಾರ ಮತ್ತು ಪೊಲೀಸರಿಗೆ ಮನವಿ ಮಾಡುತ್ತೇನೆ. ಪ್ರತಿಭಟನಾಕಾರರು ಇಂದಿನಂತೆಯೇ ಶಾಂತಿ ಕಾಪಾಡುತ್ತಾರೆ ಎಂಬ ಖಾತ್ರಿ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

