ಮಂಜೇಶ್ವರ: ಮೀಯಪದವು ಶ್ರೀಗುರುನರಸಿಂಹ ಯಕ್ಷಬಳಗ ಕಲಾಸಂಸ್ಥೆಯು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ದೇಗುಲದ ಸಹಯೋಗದೊಂದಿಗೆ ಇತ್ತೀಚೆಗೆ ಶ್ರೀಕ್ಷೇತ್ರದ ವಠಾರದಲ್ಲಿ ಯಕ್ಷಚಿಗುರು -2026 ಸಮಾರಂಭವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಂಡಿತು. ತಾಳಮದ್ದಳೆ, ಸಭಾ ಕಾರ್ಯಕ್ರಮ-ಯಕ್ಷಚಿಗುರು 2026 ಪ್ರಶಸ್ತಿ ಪ್ರದಾನ, ಯಕ್ಷಗಾನ ಬಯಲಾಟ ನಡೆಯಿತು. ಅಪರಾಹ್ನ ನಾಡಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಜಾಬಾಲಿ ನಂದಿನಿ ಪ್ರಸ್ತುತಿಗೊಂಡಿದ್ದು. ಹಿಮ್ಮೇಳದಲ್ಲಿ ಭಾಗವತರು ದೇವಿಪ್ರಸಾದ ಆಳ್ವ ತಲಪಾಡಿ, ಮದ್ದಳೆಯಲ್ಲಿ ಮಧ್ವರಾಜ ಅಡಿಗ, ಚೆಂಡೆಯಲ್ಲಿ ಜಿತೇಶ್ ದೇವಾಡಿಗ ಕೋಳ್ಯೂರು ಭಾಗವಹಿಸಿದ್ದರು. ಅರ್ಥಧಾರಿಗಳಾಗಿ ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಪ್ರೊ. ಪವನ್ ಕಿರಣ್ ಕೆರೆ, ರಾಜಾರಾಮ ರಾವ್ ಮೀಯಪದವು ಪಾಲ್ಗೊಂಡಿದ್ದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ಇದರ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿ ನಗರ ಕೈರಂಗಳ ಇದರ ಸಂಚಾಲಕ ರಾಜಾರಾಮ ಭಟ್, ಖ್ಯಾತ ವೈದ್ಯ ಡಾ. ಟಿ. ಹರಿಕಿರಣ್ ಬಂಗೇರ, ವೇದಮೂರ್ತಿ ಶ್ರೀಕೃಷ್ಣ ಮಯ್ಯ ಬೆಂಗಳೂರು, ಭಾಗವಹಿಸಿದ್ದರು. ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಅಧ್ಯಕ್ಷ ವೇದಮೂರ್ತಿ ಗಣೇಶ ನಾವಡ ಮೀಯಪದವು, ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳ ಸಂಘದ ಹಿರಿಯ ಸದಸ್ಯ ರಾಜಾರಾಮ ಹೊಳ್ಳ ಕೈರಂಗಳ ಉಪಸ್ಥಿತರಿದ್ದರು.
ಯಕ್ಷ ಚಿಗುರು 2026 ಪ್ರಶಸ್ತಿಯನ್ನು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳ ಸಂಸ್ಥೆಗೆ ಪ್ರದಾನ ಗೈಯಲಾಯಿತು. ಹರಿನಾರಾಯಣ ಮಯ್ಯ ಬಜೆ ನಿರೂಪಿಸಿದರು. ರಾಜಾರಾಮ ರಾವ್ ಮೀಯಪದವು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯೋಗೀಶ ರಾವ್ ಚಿಗುರುಪಾದೆ ಕೈರಂಗಳ ಯಕ್ಷಗಾನ ಸಂಘದ ಪರಿಚಯ ನೀಡಿ ಅಭಿನಂದನಾ ನುಡಿಗಳನ್ನಾಡಿದರು. ಗೌರೀಶ ಕಾರಂತ ಶಿರಿಯ ವಂದಿಸಿದರು. ಮಮತಾ ನಾವಡ ಹಾಗೂ ಕುಮಾರಿ ಶಾರದಾ ನಾವಡ ಪ್ರಾರ್ಥನೆ ಹಾಡಿದರು. ಬಳಿಕ ಶ್ರೀಗುರುನರಸಿಂಹ ಯಕ್ಷಬಳಗದವರಿಂದ ಭೀಷ್ಮ ಪ್ರತಿಜ್ಞೆ, ಕುಶಲವರ ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

.jpg)
.jpg)
