ನೇಪಾಳವು ಭೀಕರ ಪ್ರವಾಹದಿಂದ ತತ್ತರಿಸುತ್ತಿದೆ. 500ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಆದರೆ, ಈ ಭೀಕರ ಪ್ರಾಕೃತಿಕ ವಿಕೋಪದ ಬಗ್ಗೆ 5 ತಿಂಗಳ ಹಿಂದೆಯೇ ಕೆಲ ಅಧ್ಯಯನ ವರದಿಗಳು ಸೂಚಿಸಿದ್ದವು ಎಂಬ ಮಾತು ಈಗ ಕೇಳಿಬರುತ್ತಿದೆ.
ಈ ಶತಮಾನದ ಆರಂಭದಿಂದಲೂ ಹಿಮ ಕರಗುವಿಕೆ ಬಹಳ ಹೆಚ್ಚಾಗಿದೆ. ಇದರಿಂದ ಹಿಂದೂ ಕುಶ್ ಹಿಮಾಲಯ ಪ್ರದೇಶಾದ್ಯಂತ ಹಿಮಬಂಡೆಗಳು ಕೆಲ ವರ್ಷಗಳಿಂದ ಮತ್ತಷ್ಟು ವೇಗವಾಗಿ ಕರಗುತ್ತಿವೆ ಎಂದು ಹಿಂದೂ ಕುಶ್ ಪ್ರದೇಶದಲ್ಲಿ ಅಧ್ಯಯನ ನಡೆಸುವ ಅಂತರರಾಷ್ಟ್ರೀಯ ಸಂಸ್ಥೆಯೊಂದು ಹೇಳಿದೆ.
1975ರಿಂದ ನೀರ್ಗಲ್ಲಿನ 27 ಮೀಟರ್ನಷ್ಟು ಪದರವು ಕರಗಿಹೋಗಿದೆ ಎಂದು ಕಠ್ಮಂಡುವಿನಲ್ಲಿರುವ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್ಮೆಂಟ್(ಐಸಿಐಎಂಒಡಿ) ಸಂಸ್ಥೆ ಹೇಳಿದೆ. ಈ ಸಂಸ್ಥೆಯಲ್ಲಿ ಭಾರತ, ನೇಪಾಳ, ಭೂತಾನ್ ಮತ್ತು ಚೀನಾ ಸೇರಿದಂತೆ ಹಲವು ದೇಶಗಳು ಸದಸ್ಯತ್ವ ಹೊಂದಿವೆ.
ಇದರಿಂದಾಗಿ, ಹಿಮಾಲಯದ ಮಂಜುಗಡ್ಡೆ ಕರಗಿ ಸುರಿಯುವ ನೀರಿನ ಮೇಲೆ ಅವಲಂಬಿತವಾಗಿರುವ ಏಷ್ಯಾದ ಎರಡು ಶತಕೋಟಿ ಜನರಿಗೆ ಭವಿಷ್ಯದಲ್ಲಿ ಅಪಾಯವಿದೆ ಎಂದೂ ವರದಿಗಳು ಸೂಚಿಸಿವೆ.
ಹಿಮಪಾತದ ಬದಲು ಮಳೆ
ನೂರಾರು ಜನರನ್ನು ಬಲಿ ತೆಗೆದುಕೊಂಡ ನೇಪಾಳದ ಹಠಾತ್ ಪ್ರವಾಹಕ್ಕೆ ನಿಖರವಾಗಿ ಏನು ಕಾರಣ ಎಂಬುದರ ಬಗ್ಗೆ ವಿಜ್ಞಾನಿಗಳು ಮತ್ತು ಸಂಶೋಧಕರು ತಲೆ ಕೆಡಿಸಿಕೊಂಡಿದ್ದಾರೆ. ಹವಾಮಾನದಲ್ಲಿ ಆಗಿರುವ ಹಲವು ಬದಲಾವಣೆಯ ಅಂಶಗಳನ್ನು ಕಲೆಹಾಕಿ, ವಿಶ್ಲೇಷಣೆ ನಡೆಸುತ್ತಿದ್ದಾರೆ. ಇದರಲ್ಲಿ ಒಂದು ಆತಂಕಕಾರಿ ವಿಚಾರವೆಂದರೆ, ಪರ್ವತಗಳ 4,000 ಮೀಟರ್ ಎತ್ತರದಲ್ಲಿ ಹಿಮಪಾತದ ಬದಲು ಮಳೆಯಾಗುತ್ತಿದೆ.
ಪರ್ವತದ ಮೇಲೆ ವಾಡಿಕೆಯಂತೆ ಹಿಮಪಾತದ ಬದಲು ಮಳೆ ಏಕೆ ಸುರಿಯುತ್ತಿದೆ. ಹಿಮಬಂಡೆಗಳು ಹೇಗೆ ವೇಗವಾಗಿ ಕರಗುತ್ತಿವೆ ಎಂಬ ಪ್ರಶ್ನೆಗೆ ಜಾಗತಿಕ ತಾಪಮಾನ ಏರಿಕೆ ಕಾರಣ ಎಂದು ಹೇಳಬಹುದು ಎಂಬುದಾಗಿ ಡೆಹ್ರಾಡೂನ್ನಲ್ಲಿರುವ ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ವಿಜ್ಞಾನಿಯೊಬ್ಬರು ಎನ್ಡಿಟಿವಿಗೆ ತಿಳಿಸಿದ್ದಾರೆ.
ಹಿಂದೂ ಕುಶ್ ಪರ್ವತದ 38 ನೀರ್ಗಲ್ಲುಗಳ ವಿಶ್ಲೇಷಣೆ
1990 ಮತ್ತು 2020ರ ನಡುವೆ ಹಿಂದೂ ಕುಶ್ ಹಿಮಾಲಯ ಪ್ರದೇಶದ ಹಿಮಬಂಡೆಗಳು ಒಟ್ಟು ಪ್ರದೇಶದ ಸುಮಾರು ಶೇ 12ರಷ್ಟನ್ನು, ಹಿಮ ಸಂಗ್ರಹದ ಪ್ರಮಾಣದಲ್ಲಿ ಶೇ 9ರಷ್ಟನ್ನು ಕಳೆದುಕೊಂಡಿವೆ ಎಂದು ಈ ವರ್ಷದ ಮಾರ್ಚ್ನಲ್ಲಿ ಪ್ರಕಟವಾದ ಐಸಿಐಎಂಒಡಿಯ ಎರಡು ವರದಿ ತಿಳಿಸಿವೆ.
ಹಿಂದೂ ಕುಶ್ ಪರ್ವತದ 38 ನೀರ್ಗಲ್ಲುಗಳಲ್ಲಿ ಆಗಿರುವ ಬದಲಾವಣೆಯ ಡಾಟಾವನ್ನು ವಿಜ್ಞಾನಿಗಳು ವಿಶ್ಲೇಷಣೆ ನಡೆಸಿದ್ದಾರೆ. ಇದರಲ್ಲಿ 2000ನೇ ಇಸವಿಯಿಂದ ನೀರ್ಗಲ್ಲುಗಳ ಕರಗುವಿಕೆ ದ್ವಿಗುಣಗೊಂಡಿರುವುದು ಕಂಡುಬಂದಿದೆ. ಹಿಮಾಲಯದ ಕ್ರಯೋಸ್ಪಿಯರ್ (ಹಿಮ ಮತ್ತು ಮಂಜುಗಡ್ಡೆಯ ವಲಯ) ಎಂದೂ ಸರಿಯಾಗದ ನಿರ್ಣಾಯಕ ಕುಸಿಯುವ ಹಂತಕ್ಕೆ ತಲುಪುತ್ತಿರುವುದು ಕಂಡುಬಂದಿದೆ.
ಈ 38 ನಿರ್ಗಲ್ಲುಗಳ ಪೈಕಿ ಕೇವಲ 7 ಮಾತ್ರ ಜಾಗತಿಕ ಹವಾಮಾನ ಮಾನದಂಡಗಳನ್ನು ಪೂರೈಸಿವೆ ಎಂದು ವರದಿ ತಿಳಿಸಿದೆ.

