ಗುವಾಹಟಿ: ಅಸ್ಸಾಂನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹಗಳಿಂದ ಪೀಡಿತರಾದವರ ಪುನರ್ವಸತಿ ಹಾಗೂ ಹಾನಿಗೊಳಗಾದ ಆಸ್ತಿಪಾಸ್ತಿಗಳ ದುರಸ್ತಿಗೆ 1 ಸಾವಿರ ಕೋಟಿ ರೂ.ಗೂ ಅಧಿಕ ಹಣದ ಅಗತ್ಯವಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಅವರು ಬುಧವಾರ ತಿಳಿಸಿದ್ದಾರೆ.
ಗುವಾಹಟಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಸ್ಸಾಂ ನೆರೆ ಸಂತ್ರಸ್ತರ ಪುನರ್ವಸತಿಗೆ ಕೇಂದ್ರ ಸರಕಾರ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆಯನ್ನು ನೀಡಿದ್ದಾರೆಂದು ತಿಳಿಸಿದ್ದಾರೆ.
ಸಂತ್ರಸ್ತರಿಗೆ ಖಾಯಂ ಪರಿಹಾರವನ್ನು ನೀಡುವ ಉದ್ದೇಶದಿಂದ ಆಗಸ್ಟ್ 9ರಂದು ತ್ವರಿತ ಪರಿ ಹಾರ ಮೌಲ್ಯಮಾಪನ ಅಭಿಯಾವನ್ನು ಹಮ್ಮಿಕೊಳ್ಳಲಾಗಿದೆಯೆಂದು ಹೇಳಿದರು. ಪ್ರಾಥಮಿಕ ವರದಿಯ ಪ್ರಕಾರ 8 ಸಾವಿರಕ್ಕೂ ಅಧಿಕ ಕುಟುಂಬಗಳ ಆಸ್ತಿ ಹಾನಿಯ ಮೌಲ್ಯಮಾಪನ ನಡೆಸಲಾಗಿದೆ. ಸುಮಾರು 150 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿದೆಯೆಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ ಎಂದು ಸರ್ಮಾ ಹೇಳಿದರು.
ಹಾನಿಯ ಮೌಲ್ಯಮಾಪನವು ಆಗಸ್ಟ್ 30ರವರೆಗೆ ಮುಂದುವರಿಯಲಿದೆ. ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಅಸ್ಸಾಂನ ಉತ್ತರಭಾಗದ ಜಿಲ್ಲೆಗಳ 50,000-60,000 ಕುಟುಂಬಗಳು ಸಂತ್ರಸ್ತಗೊಂಡಿದ್ದವು.

