ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಆಶ್ರಯದಲ್ಲಿ ಶ್ರೀ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ಕೇರಳಂ ಸಹಯೋಗದಲ್ಲಿ ಕರ್ಕಾಟಕ ಮಾಸದ ಔಷಧೀಯ ಗಂಜಿ ವಿತರಣಾ ಕಾರ್ಯಕ್ರಮ ಭಾನುವಾರ ಸಂಪನ್ನಗೊಂಡಿತು.
ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಣ್ಣೂರಿನ ಪವಿತ್ರನ್ ಗುರುಕ್ಕಳ್ ಅವರು ಮಲಯಾಳದಲ್ಲಿ ಮತ್ತು ಶಾರದಾ ಆಯುರ್ವೇದಿಕ್ ಕಾಲೇಜಿನ ಡಾ. ಅನೂಪ್ ಅವರು ಕನ್ನಡದಲ್ಲಿ ಔಷಧೀಯ ಗಂಜಿಯ ಮಹತ್ವ ಮತ್ತು ಸುತ್ತಮುತ್ತಲಿನ ಗಿಡಮೂಲಿಕೆಗಳ ಮಹತ್ವವನ್ನು ಪರಿಚಯ ಮಾಡಿಕೊಟ್ಟರು.
ಬಳಿಕ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಪಯ್ಯನ್ನೂರಿನ ಸೂರ್ಯ ಟ್ರಸ್ಟ್ ಅಧ್ಯಕ್ಷ ಶಿವಪ್ರಸಾದ್, ತಲಶ್ಶೇರಿಯ ಬಿ.ಎಸ್. ಸಂಸ್ಥೆಯ ಕಿಶೋರ್ ಶಣೈ ಅವರು ಕಾರ್ಯಕ್ರಮದ ಮಹತ್ವದ ಕುರಿತು ಸಂತಸ ವ್ಯಕ್ತಪಡಿಸಿ ಮಾತನಾಡಿದರು. ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಕಾಞಂಗಾಡಿನ ವಕೀಲ ಪದ್ಮನಾಭನ್, ಗೋಕುಲದಾಸ್ ಬಂದ್ಯೋಡು, ಪಿ.ಆರ್ ಶೆಟ್ಟಿ ಪೊಯ್ಯೆಲ್ ಮತ್ತು ಸಜೀವನ್ ಪಾಲಕ್ಕಾಡ್ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. 1200 ಕ್ಕೂ ಹೆಚ್ಚು ಔಷಧೀಯ ಸಸ್ಯಗಳ ಮಾಹಿತಿ ಇರುವ ಕೇರಳದ ಪ್ರಸಿದ್ಧ ನಾಟಿ ವೈದ್ಯ ಶರೀಫ್ ಫರಾಲ್ ಅವರಿಗೆ 2026ನೇ ಸಾಲಿನ ಆಯುಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಂಗಳೂರಿನ ತುಳುನಾಡ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ ಎಂ. ಬಿ ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಶ್ರೀಗಳು ಆಶೀರ್ವಚನ ನೀಡಿದರು.
ಕುಮಾರಿ ಶ್ರಾವಣ್ಯ ಕೊಂಡೆವೂರು ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕಣ್ಣೂರಿನ ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಜಯದೇವನ್ ಸ್ವಾಗತಿಸಿ, ಸದಾಶಿವ ಮೋಂತಿಮಾರು ವಂದಿಸಿದರು. ದಿನಕರ ಹೊಸಂಗಡಿ ಮತ್ತು ಶೈಲೇಶ್ ನಿರೂಪಿಸಿದರು. ಕೇರಳದ ಪ್ರಸಿದ್ಧ ನಾಟಿ ವೈದ್ಯರು ಪರಿಸರದ ಖಾದ್ಯ ಗಿಡ ಬಳ್ಳಿ ಎಲೆಗಳನ್ನು ಬಳಸಿ ತಯಾರಿಸಿದ ಗಂಜಿ ಮತ್ತು ವಿವಿಧ ಖಾದ್ಯ ವಸ್ತುಗಳನ್ನು ಆಗಮಿಸಿದ ಪರಿಸರಾಸಕ್ತರು ಸವಿದು ಸಂತಸಪಟ್ಟರು.

.jpeg)
.jpeg)
