ಕಾಸರಗೋಡು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬೆಂಗಳೂರು ಹಾಗೂ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ 'ಬಸವಣ್ಣ ಮತ್ತು ಕನಕದಾಸರು: ತೌಲನಿಕ ನೋಟ'ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಗಸ್ಟ್ 13 ರಂದು(ಇಂದು) ಕಾಸರಗೋಡು ಸರ್ಕಾರಿ ಕಾಳೇಜಿನಲ್ಲಿ ನಡೆಯಲಿದೆ.
ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ವಿಚಾರ ಸಂಕಿರಣವನ್ನು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ. ತ. ಚಿಕ್ಕಣ್ಣ ಅವರು ಉದ್ಘಾಟಿಸುವರು. ಸರ್ಕಾರಿ ಕಾಲೇಜು, ಕಾಸರಗೋಡಿನ ಪ್ರಾಂಶುಪಾಲ ಡಾ. ವಿ.ಎಸ್. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸುವರು.
ಬೆಳಗ್ಗೆ 11ರಿಂದ ವಿಚಾರ ಸಂಕಿರಣದ ಶೈಕ್ಷಣಿಕ ಗೋಷ್ಠಿಗಳು ನಡೆಯಲಿವೆ. 'ಬಸವಣ್ಣ ಮತ್ತು ಕನಕದಾಸರು: ಮಾನವ ಸಂಬಂಧಗಳು'ಎಂಬ ವಿಷಯದ ಕುರಿತು ಮಂಗಳೂರಿನ ಡಾ. ದಿನೇಶ್ ನಾಯಕ್, 'ಬಸವಣ್ಣ ಮತ್ತು ಕನಕದಾಸರ ಸಾಹಿತ್ಯದಲ್ಲಿ ದೇಸೀ ಮೀಮಾಂಸೆ' ಎಂಬ ವಿಷಯದ ಕುರಿತು ಉಜಿರೆಯ ಡಾ. ಭೋಜಮ್ಮ ಕೆ.ಎನ್ ಹಾಗೂ 'ಬಸವಣ್ಣ-ಕನಕದಾಸರು: ವರ್ತಮಾನದ ನೋಟ' ಎಂಬ ವಿಷಯದ ಕುರಿತು ಕಾಸರಗೋಡಿನ ಡಾ. ಸೌಮ್ಯ ಅವರು ವಿಷಯ ಮಂಡಿಸುವರು.
ವಿಚಾರ ಸಂಕಿರಣದ ಅಂಗವಾಗಿ ಕಾಸರಗೋಡಿನ ರಂಗ ಚಿನ್ನಾರಿ ತಂಡದಿಂದ ಕೀರ್ತನ ಗಾಯನ ಕಾರ್ಯಕ್ರಮ ನಡೆಯುವುದು. ಬಸವಣ್ಣ ಮತ್ತು ಕನಕದಾಸರ ಚಿಂತನೆ, ಸಾಹಿತ್ಯ, ಸಾಮಾಜಿಕ ದೃಷ್ಟಿಕೋನ ಹಾಗೂ ಸಮಕಾಲೀನ ಪ್ರಸ್ತುತತೆಯನ್ನು ತೌಲನಿಕವಾಗಿ ಅಧ್ಯಯನ ಮಾಡುವ ಉದ್ದೇಶದಿಂದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕಿ ಸುಜಾತ ಎಸ್ ತಿಳಿಸಿದ್ದಾರೆ.

