ಲಖನೌ: 'ಸೈಬರ್ ವಂಚನೆ ಪ್ರಕರಣಗಳಲ್ಲಿ, ತನಿಖೆಯ ಭಾಗವಾಗಿ ವ್ಯಕ್ತಿಯ ಬ್ಯಾಂಕ್ ಖಾತೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ತನಿಖಾ ಸಂಸ್ಥೆಗಳಿಗೆ ಅವಕಾಶವಿಲ್ಲ' ಎಂದು ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠವು ತೀರ್ಪು ನೀಡಿದೆ.
ಸೈಬರ್ ಅಪರಾಧ ಪ್ರಕರಣಗಳಲ್ಲಿ, ವ್ಯಕ್ತಿಯ ಬ್ಯಾಂಕ್ ಖಾತೆಯ ಮೂಲಕ ನಿರ್ದಿಷ್ಟ ಮೊತ್ತದ ಹಣ ವರ್ಗಾವಣೆ ಆಗಿದ್ದರೆ, ಆ ನಿರ್ದಿಷ್ಟ ಮೊತ್ತಕ್ಕೆ ಸಂಬಂಧಿತ ವಹಿವಾಟಿನ ಮೇಲೆ ನಿರ್ಬಂಧ ಹೇರಬಹುದೇ ಹೊರತು, ಇಡೀ ಬ್ಯಾಂಕ್ ಖಾತೆಯ ವಹಿವಾಟನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲು ಅವಕಾಶವಿಲ್ಲ' ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಲಖನೌ ಮೂಲದ ಉದ್ಯಮಿ ರಿತೇಶ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ಶೇಖರ್ ಬಿ. ಸರಾಫ್ ಮತ್ತು ಅಬ್ಧೇಶ್ ಚೌಧರಿ ಅವರನ್ನೊಳಗೊಂಡ ಪೀಠವು, 'ಅರ್ಜಿದಾರರ ಬ್ಯಾಂಕ್ ಖಾತೆ ಸ್ಥಗಿತಗೊಳಿಸದಂತೆ ಹಾಗೂ ವಹಿವಾಟು ಮರುಸ್ಥಾಪಿಸುವಂತೆ (ವಿವಾದಿತ ಮೊತ್ತವಾದ ₹36 ಸಾವಿರ ಹೊರತುಪಡಿಸಿ) ಬ್ಯಾಂಕ್ಗೆ ಸೂಚನೆ ನೀಡಿತು.
ನಿರ್ದಿಷ್ಟ ಮೊತ್ತದ ವಹಿವಾಟು ವ್ಯಕ್ತಿಯ ಖಾತೆಯ ಮೂಲಕ ನಡೆದಿದೆ ಎಂಬ ಕಾರಣಕ್ಕೆ, ಆ ಖಾತೆದಾರನನ್ನು ಮತ್ತು ಅವರಿಗೆ ಸೇರಿದ ಕಾನೂನುಬದ್ಧ ಹಣವನ್ನು ಅವರು ಬಳಸಿಕೊಳ್ಳದಂತೆ ವಂಚಿಸಬಾರದು. ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವ ಅಧಿಕಾರವನ್ನು ತನಿಖಾಧಿಕಾರಿಗಳು ವ್ಯಕ್ತಿಯ ಸಂಪೂರ್ಣ ಆರ್ಥಿಕ ಜೀವನ ಮತ್ತು ಕಾನೂನುಬದ್ಧ ವ್ಯವಹಾರವನ್ನು ಸ್ಥಗಿತಗೊಳಿಸುವ ಅನಿಯಂತ್ರಿತ ಅಧಿಕಾರ ಎಂದು ಪರಿಗಣಿಸಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
'ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದರೆ ಈ ಬಗ್ಗೆ ತಕ್ಷಣವೇ ಸಂಬಂಧಿತ ಬ್ಯಾಂಕ್ನ ನೋಡಲ್ ಅಧಿಕಾರಿಗೆ ತನಿಖಾಧಿಕಾರಿ ಇಮೇಲ್ ಮೂಲಕ ಮಾಹಿತಿ ರವಾನಿಸಬೇಕು ಎಂದೂ ಕೋರ್ಟ್ ಸೂಚಿಸಿದೆ.

