ಕಾಸರಗೋಡು: ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಐದು ದಶಕಗಳ ಕಾಲ ಸೇವೆ ಸಲ್ಲಿಸಿರುವ ಕಾಸರಗೋಡಿನ 'ಶ್ರೀ ಪುರಂದರದಾಸ ಸಂಗೀತ ಕಲಾಮಂದಿರ'ದ ಮೂರು ದಿನಗಳ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರು ಸುವರ್ಣ ಮಹೋತ್ಸವ ಉದ್ಘಾಟಿಸಿದರು. ವೆಂಕಟರಮಣ ಭವನದ ಕೆ. ಎನ್. ರಾಮಕೃಷ್ಣ ಹೊಳ್ಳ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸತೀಂದ್ರನ್, ಕಲಾಮಂದಿರದ ಹಳೇ ವಿದ್ಯಾರ್ಥಿನಿ ಪ್ರೇಮಲತಾ, ಹಿರಿಯ ವಿದ್ಯಾರ್ಥಿ ಹಾಗೂ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಾಜಕುಮಾರ್ ಕಲ್ಲೂರಾಯ; ಹಾಗೂ ಕಲಾಮಂದಿರದ ಸ್ಥಾಪಕ ಮತ್ತು ಬೋಧಕ ಕಲ್ಮಾಡಿ ಸದಾಶಿವ ಆಚಾರ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಲಾಮಂದಿರದ ಹಳೇ ಹಾಗೂ ಹಾಲಿ ವಿದ್ಯಾರ್ಥಿಗಳು, ಪ್ರಾದೇಶಿಕ ಖ್ಯಾತ ಕಲಾವಿದರು, ಸಂಗೀತಾಸಕ್ತರು, ಪೆÇೀಷಕರು ಹಾಗೂ ಕಾಸರಗೋಡು ಮತ್ತು ಸುತ್ತಮುತ್ತಲ ಪ್ರದೇಶಗಳ ಹಿತೈಷಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಕಲಾಮಂದಿರದ ವಿದ್ಯಾರ್ಥಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಿದರು. ವಿದುಷಿ ಆತ್ರೇಯಿ ಕೃಷ್ಣ (ಗಾಯನ) ಅವರ ಪ್ರಮುಖ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ವಿದುಷಿ ಮಹತಿ ಕೆ. ಪಿಟೀಲು ಮತ್ತು ವಿದ್ವಾನ್ ಸುನಾದಕೃಷ್ಣ ಅಮೈ ಮೃದಂಗ ಸಾಥ್ ನೀಡಿದರು. ಮೂರು ದಿನಗಳ ಸಂಗೀತೋತ್ಸವದ ಅಂಗವಾಗಿ ಖ್ಯಾತ ಸಂಗೀತಗಾರರು, ವಿದ್ಯಾರ್ಥಿಗಳು ಮತ್ತು ಆಹ್ವಾನಿತ ಕಲಾವಿದರ ಪ್ರದರ್ಶನಗಳೊಂದಿಗೆ ಸುವರ್ಣ ಮಹೋತ್ಸವದ ಸಂಭ್ರಮ ಆ 30ರ ವರೆಗೆ ಮುಂದುವರಿಯಲಿದೆ.
ಆಗಸ್ಟ್ 30ರ ಬೆಳಿಗ್ಗೆ 11ಕ್ಕೆ ಶ್ರೀಎಡನೀರು ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಪಿಟೀಲು ವಿದ್ವಾನ್ ವಿಠಲ್ ರಾಮಮೂರ್ತಿ ಮತ್ತು ತಂಡದವರ ಕಛೇರಿ ನಡೆಯಲಿದೆ.
ಅಂದು ಮಧ್ಯಾಹ್ನ 3ಕ್ಕೆ ಶ್ರೀಮದೆಡನೀರು ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಲಾಮಂದಿರದ ಸಂಸ್ಥಾಪಕ ಗುರು ಕಲ್ಮಾಡಿ ಶ್ರೀ ಸದಾಶಿವ ಆಚಾರ್ಯ ಅವರು ರಚಿಸಿದ ಕೃತಿಗಳ ಬಿಡುಗಡೆ, ಐದು ದಶಕಗಳಲ್ಲಿ ಕಲಾಮಂದಿರದಲ್ಲಿ ಸೇವೆ ಸಲ್ಲಿಸಿದ ಗುರುಗಳಿಗೆ ಗುರುವಂದನೆ ಹಾಗೂ ವಿದ್ವಾನ್ ವಿಠಲ್ ರಾಮಮೂರ್ತಿ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ. ಬಳಿಕ ಖ್ಯಾತ ಮಲ್ಲಾಡಿ ತಂಡದವರ ಭವ್ಯ ಸಂಗೀತ ಕಛೇರಿಯೊಂದಿಗೆಮಹೋತ್ಸವ ಸಂಪನ್ನಗೊಳ್ಳಲಿದೆ.



